ಪ್ರಸಿದ್ಧ ಬಾಕ್ಸರ್‌, ಆತನ ತಂದೆ, ಸಂಬಂಧಿಕ ಮೇಲೆ ಚೂರಿ ಇರಿತ: ಬಾಕ್ಸರ್‌ ಸ್ಥಿತಿ ಗಂಭೀರ

ಕಾಸರಗೋಡು: ಪಟಾಕಿ ಸಿಡಿಸುವ ವಿಚಾರದಲ್ಲಿ ಉಂಟಾದ ಜಗಳದ ಮುಂದುವರಿದ ಭಾಗವಾಗಿ ಜಿಲ್ಲಾ ಮಟ್ಟದ ಬಾಕ್ಸರ್ ಮೊಹಮ್ಮದ್ ಫವಾಜ್ (20), ಅವರ ತಂದೆ ಇಬ್ರಾಹಿಂ ಜೈನುದ್ದೀನ್ (62), ಚಿಕ್ಕಪ್ಪ ರಜಾಕ್ ಮುಹಮ್ಮದ್ (50) ಮತ್ತು ಸೋದರಸಂಬಂಧಿ ಮುನ್ಶೀದ್ ಟಿ.ಎಂ (28) ಎಂಬವರ ಮೇಲೆ ಹತ್ತು ಮಂದಿಯ ತಂಡ ಚಾಕು ಮತ್ತು ಕತ್ತಿಗಳಿಂದ ಇರಿದು ಗಂಭೀರ ಗಾಯಗೊಳಿಸಿದ ಘಟನೆ ವಿದ್ಯಾನಗರ ಪೊಲೀಸ್‌ ಠಾಣಾ ವ್ಯಾಪ್ತಿಯಲ್ಲಿ ಸಂಭವಿಸಿದೆ.

ಫವಾಜ್‌ ಮೇಲೆ ಮೊದಲು ಪೆಪ್ಪರ್ ಸ್ಪ್ರೇಯಿಂದ ದಾಳಿ ಮಾಡಿದ ತಂಡ ಅವರ ಬೆನ್ನಿಗೆ ನಾಲ್ಕು ಬಾರಿ ಇರಿದಿದ್ದಾಗಿ ತಿಳಿದುಬಂದಿದೆ. ಗಾಯಾಳು ಫವಾಜ್ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಜೀವನ್ಮರಣ ಸ್ಥಿತಿಯಲ್ಲಿ ಹೋರಾಡುತ್ತಿದ್ದಾರೆ. “ಪೆಪ್ಪರ್ ಸ್ಪ್ರೇ ಅವರ ಶ್ವಾಸಕೋಶಕ್ಕೆ ಪ್ರವೇಶಿಸಿದ್ದು, ತಲೆ ಮತ್ತು ಭುಜಗಳ ಮೇಲೆ ಏಳು ಬಾರಿ ಇರಿದಿದ್ದಾಗಿ ಫವಾಜ್‌ ತಂದೆ ತಂದೆ ಜೈನುದ್ದೀನ್ ತಿಳಿಸಿದ್ದಾರೆ. ತನ್ನ ಮೇಲೆಯೂ ಗಂಭೀರ ಹಲ್ಲೆ ನಡೆದಿದ್ದು, ನಾನು ಹೇಗೆ ಬದುಕಿದ್ದೇನೆ ಎಂದೇ ನನಗೆ ತಿಳಿಯುತ್ತಿಲ್ಲ” ಎಂದು ಅವರು ಹೇಳಿದರು.

ಈ ದಾಳಿಗೆ ಸಂಬಂಧಿಸಿದಂತೆ ಪೊಲೀಸರು ಒಬ್ಬ ವ್ಯಕ್ತಿ, ಹಾಗೂ ಆತನ ಮೂವರು ಪುತ್ರರು ಮತ್ತು ಇತರ ಆರು ಜನರ ಮೇಲೆ ಪ್ರಕರಣ ದಾಖಲಿಸಿದ್ದಾರೆ. ಮೊಯಿಧೀನ್ ಬಿಎ ಮತ್ತು ಈತನ ಪುತ್ರರಾದ ಅಬ್ದುಲ್ ರೆಹಮಾನ್ ಮಿಥಿಲಾಜ್ ಮತ್ತು ಅಜರುದ್ದೀನ್ ಬಂಧಿತ ಆರೋಪಿಗಳು.

ಕಾಸರಗೋಡು ಪಟ್ಟಣ ಮತ್ತು ಚೆರ್ಕಳ ನಡುವಿನ ರಾಷ್ಟ್ರೀಯ ಹೆದ್ದಾರಿ 66 ರ 4 ನೇ ಮೈಲಿಯಲ್ಲಿ ಸೂಪರ್ ಮಾರ್ಕೆಟ್ ನಡೆಸುತ್ತಿರುವ ಜೈನುದ್ದೀನ್ ಅವರ ಮನೆಯ ಹೊರಗೆ ಗುಂಪೊಂದು ಪಟಾಕಿಗಳನ್ನು ಸಿಡಿಸಿ ತೊಂದರೆ ಕೊಡಲಾರಂಭಿಸಿತು. ಇದನ್ನು ಮುಸ್ತಫಾ ಆಕ್ಷೇಪಿಸಿದಾಗ, ಗುಂಪು ಅವರ ಮಾತನ್ನು ಧಿಕ್ಕರಿಸಿ ಇನ್ನಷ್ಟು ಪಟಾಕಿಗಳನ್ನು ಸಿಡಿಸಿತು ಎಂದು ತಿಳಿದುಬಂದಿದೆ. “ಹತ್ತಿರದ ಅಂಗಡಿಯಲ್ಲಿ ಚಹಾ ಕುಡಿಯುತ್ತಿದ್ದ ನನ್ನ ಮಗ ಮುಸ್ತಫಾಗೆ ಗ್ಯಾಂಗ್ ಸದಸ್ಯನೊಬ್ಬ ಅವನ ಮುಖದ ಮೇಲೆ ಬಿಸಿ ಚಹಾ ಎರಚಿದ್ದು, ಆ ಬಳಿಕ ಗಲಾಟೆ ನಡೆಯಿತು” ಎಂದು ಜೈನುದ್ದೀನ್ ಆರೋಪಿಸಿದ್ದಾರೆ.

ರಾತ್ರಿ 11 ಗಂಟೆ ಸುಮಾರಿಗೆ, ಸಿಟಿಜನ್ ನಗರದಲ್ಲಿ 500 ಮೀಟರ್ ದೂರದಲ್ಲಿ ವಾಸಿಸುವ ಜೈನುದ್ದೀನ್ ಅವರಿಗೆ ತಮ್ಮ ಮಗ ಜಗಳವಾಡುತ್ತಿದ್ದಾನೆ ಎಂದು ಕರೆ ಬಂದಿತು. ಮಲಗಲು ಹೊರಟಿದ್ದ ಜೈನುದ್ದೀನ್‌ ತನ್ನ ಮಗನನ್ನು ಮನೆಗೆ ಕರೆದುಕೊಂಡು ಬರಲು ನಿರ್ಧರಿಸಿದರು. ಆದರೆ ರಾತ್ರಿ ಹೊತ್ತು ಅವರಿಗೆ ಕಾರು ಓಡಿಸಲು ಸಾಧ್ಯವಾಗದ ಕಾರಣ, ತನ್ನ ಸಹೋದರ (ರಜಾಕ್) ನನ್ನು ಕರೆದುಕೊಂಡು ಹೋಗಿದ್ದಾರೆ.
ಸ್ಥಳಕ್ಕೆ ತೆರಳಿ ಅವರು ಫವಾಜ್ ನನ್ನು ಮನೆಗೆ ಬರುವಂತೆ ಹೇಳಿದ್ದಾರೆ. ಮಗನನ್ನು ಕರೆದುಕೊಂಡು ಬರುತ್ತಿದ್ದಾಗ ಹಿಂದಿನಿಂದ ಬಂದ ದುಷ್ಕರ್ಮಿಗಳು ಫವಾಜ್‌ ಮೇಲೆ ಚೂರಿಯಿಂದ ಇರಿದಿದ್ದಾರೆ. ನಂತರ ಜೈನುದ್ದೀನ್‌ ಅವರನ್ನು ಹಿಂದಿನಿಂದ ಹಿಡಿದು ತಲೆ ಹಾಗೂ ಭುಜಗಳಿಗೆ ಏಳು ಬಾರಿ ಇರಿದು, ಪೆಪ್ಪರ್‌ ಸ್ಪ್ರೇ ದಾಳಿ ಮಾಡಿದ್ದಾರೆ. ಕಾರಿನಲ್ಲಿ ಕಾಯುತ್ತಿದ್ದ ರಜಾಕ್ ಮತ್ತು ಆಕಸ್ಮಿಕವಾಗಿ ಹಾದುಹೋಗುತ್ತಿದ್ದ ಮುನ್ಶೀದ್ ಹಲ್ಲೆಯನ್ನು ತಡೆಯಲು ಧಾವಿಸಿದಾಗ, ಕತ್ತಿಯಿಂದ ಶಸ್ತ್ರಸಜ್ಜಿತನಾದ ಮೊಯಿಧೀನ್ ಇಬ್ಬರನ್ನೂ ಗಾಯಗೊಳಿಸಿದ್ದಾನೆ ಎಂದು ಆರೋಪಿಸಲಾಗಿದೆ.

error: Content is protected !!