ಬೆಂಗಳೂರು: ನಟಿ ರನ್ಯಾ ರಾವ್ ಚಿನ್ನ ಕಳ್ಳ ಸಾಗಣೆ ಪ್ರಕರಣ ರಾಜ್ಯದಲ್ಲಿ ಸಾಕಷ್ಟು ಸದ್ದು ಮಾಡುತ್ತಿದ್ದು, ಕಾಳದಂಧೆಕೋರರು ದುಬೈನಿಂದಲೇ ಭಾರತಕ್ಕೆ ಚಿನ್ನ ಸ್ಮಗ್ಲಿಂಗ್ ಮಾಡೋದು ಯಾಕೆ ಎನ್ನುವ ಪ್ರಶ್ನೆಗೆ ಉತ್ತರ ಸಿಕ್ಕಿದೆ.
ತೆರಿಗೆ ವಂಚಕರು ತಾವು ಅಕ್ರಮವಾಗಿ ಗಳಿಸಿದ ಕಪ್ಪು ಹಣವನ್ನು ಬಿಳಿ ಮಾಡುವ ಸಲುವಾಗಿ ಕಾಳ ಸಂತೆಯಲ್ಲಿ ಚಿನ್ನ ಖರೀದಿಸುತ್ತಾರೆ. ಚಿನ್ನದ ಬೆಲೆ ಯಾವತ್ತೂ ಕಡಿಮೆಯಾಗದಿರುವುದರಿಂದ ಈ ಈ ಕಪ್ಪು ಹಣವನ್ನು ಚಿನ್ನದ ಮೇಲೆ ಹೂಡಿಕೆ ಮಾಡುತ್ತಾರೆ.
ಇದಕ್ಕಾಗಿಯೇ ಕೆಲವು ಮಧ್ಯವರ್ತಿಗಳಿದ್ದಾರೆ. ಬ್ಲ್ಯಾಕ್ ಮನಿ ಹೊಂದಿರುವ ಕುಳಗಳು ಹವಲಾ ಮೂಲಕ ಮಧ್ಯವರ್ತಿಗಳಿಗೆ ಹಣ ಕೊಟ್ಟು ಸ್ಮಗ್ಲರ್ಗಳ ಮುಖಾಂತರ ಚಿನ್ನವನ್ನು ತರಿಸಿ ಹಣ ಕೊಟ್ಟ ಖದೀಮರಿಗೆ ಕೊಡುತ್ತಾರೆ. ಈ ಸ್ಮಗ್ಲರ್ಗಳ ಪೈಕಿ ನಟಿ ರನ್ಯಾ ರಾವ್ ಕೂಡಾ ಒಬ್ಬಳು. ಆದ್ದರಿಂದಲೇ ಈ ಪ್ರಕರಣದಲ್ಲಿ ಹಲವು ಮಂದಿ ಆರೋಪಿಗಳಿದ್ದಾರೆ.
ದುಬೈನಲ್ಲಿ ಎಷ್ಟು ಬೇಕಾದರೂ ಚಿನ್ನ ಖರೀದಿಸುವ ಅವಕಾಶ ಇದೆ, ಆದರೆ ಅದರಲ್ಲಿ ಇಂತಿಷ್ಟು ಪ್ರಮಾಣವನ್ನಷ್ಟೇ ಭಾರತಕ್ಕೆ ತರಬಹುದು. ಇಲ್ಲವಾದರೆ ಭಾರತಕ್ಕೆ ಆಮದು ಸುಂಕ ನೀಡಬೇಕು. ಆದರೆ ಅದು ದುಬಾರಿಯಾಗಿರುವುದಲ್ಲದೆ, ಅದರ ಷರತ್ತುಗಳು ಕೂಡಾ ಕಠಿಣವಾಗಿರುತ್ತದೆ. ಅದಕ್ಕಾಗಿ ವಿಮಾನದ ಅಧಿಕಾರಿಗಳನ್ನು ಸೆಟಿಂಗ್ ಮಾಡಿ ಚಿನ್ನ ಸ್ಮಗ್ಲಿಂಗ್ ಮಾಡುವ ಸಾಧ್ಯತೆ ಇದೆ ಎಂದು ನಿವೃತ್ತ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.