ವಿಧಾನಸಭಾ ಕಲಾಪದಲ್ಲಿ ಕರಾವಳಿ ಅಭಿವೃದ್ಧಿ ಕುರಿತು ಚರ್ಚೆ!
ಬೆಂಗಳೂರು: ಕರಾವಳಿ ಭಾಗದಲ್ಲಿ ಅಭಿವೃದ್ಧಿ ಕುರಿತಾದ ಚರ್ಚೆಗೆ ವಿಧಾನಸಭೆಯ ಕಲಾಪದಲ್ಲಿ ಅವಕಾಶ ದೊರೆತ ಸಂದರ್ಭದಲ್ಲಿ ಕರಾವಳಿಯ ಬಿಜೆಪಿ ಶಾಸಕರು ಅಭಿವೃದ್ಧಿಗೆ ಇರುವ ಅವಕಾಶಗಳು ಮತ್ತು ಸರಕಾರ ಕೈಗೊಳ್ಳಬೇಕಾದ ಕ್ರಮಗಳ ಕುರಿತು ಸರಕಾರದ ಗಮನ ಸೆಳೆದಿದ್ದಾರೆ.
ಶಾಸಕ ಸುನಿಲ್ ಕುಮಾರ್ ನೇತೃತ್ವದಲ್ಲಿ ಕರಾವಳಿಯ ಶಾಸಕರು ಒಗ್ಗಟ್ಟಾಗಿ ಕರಾವಳಿ ಜಿಲ್ಲೆಗಳ ಅಭಿವೃದ್ಧಿಗೆ ಸರಕಾರ ಯಾವೆಲ್ಲ ಕ್ರಮ ಕೈಗೊಳ್ಳಬೇಕು ಎಂಬುದರ ಬಗ್ಗೆ ಸರಕಾರದ ಮುಂದಿಟ್ಟರು.
ಶಾಸಕರಾದ ಭರತ್ ಶೆಟ್ಟಿ ವೈ., ಹರೀಶ್ ಪೂಂಜ ಅವರು ಕರಾವಳಿಯ ಅಭಿವೃದ್ಧಿಗೆ ಬೃಹತ್ ಪ್ಯಾಕೇಜ್ ಒಂದರ ಅಗತ್ಯವಿದೆ ಎಂದು ಸರಕಾರದ ಗಮನ ಸೆಳೆದರೆ, ಶಾಸಕ ಸುನಿಲ್ ಕುಮಾರ್ ಮಾತನಾಡಿ ದೇವಸ್ಥಾನದ ನಿರ್ವಹಣೆ, ಹೋಟೆಲ್ ನಿರ್ವಹಣೆ, ಖಾಸಗಿ ಬಸ್ ನಿರ್ವಹಣೆಯಲ್ಲಿ ರಾಜ್ಯದಲ್ಲೇ ಕರಾವಳಿ ಜಿಲ್ಲೆಗಳು ಪ್ರಥಮ ಸ್ಥಾನದಲ್ಲಿದೆ. ಇದರೊಂದಿಗೆ ಶಿಕ್ಷಣ ಆರೋಗ್ಯ ಬ್ಯಾಂಕಿಂಗ್ ಕ್ಷೇತ್ರದಲ್ಲಿ ಕೂಡ ಮುಂದಿದೆ. ಅಭಿವೃದ್ಧಿಯ ವಿಚಾರ ಬಂದಾಗ ಜನರು ಬಯಸಿದಷ್ಟು ಪ್ರಗತಿ ಸಾಧ್ಯವಾಗಿಲ್ಲ. ಪ್ರವಾಸೋದ್ಯಮದ ಅಭಿವೃದ್ಧಿಗೆ ಸಿ ಆರ್ ಜೆಡ್ ರಿಯಾಯಿತಿ,
ಬೃಹತ್ ಬಂದರುಗಳ ನಿರ್ಮಾಣ, ಕುಡಿಯುವ ನೀರಿಗಾಗಿ ಪಶ್ಚಿಮ ವಾಹಿನಿ ಯೋಜನೆ ಸೇರಿದಂತೆ ವಿವಿಧ ಯೋಜನೆಗಳನ್ನು ಸರಕಾರದ ಮುಂದಿಟ್ಟರು.
ಶಾಸಕ ಭರತ್ ಶೆಟ್ಟಿ ವೈ. ಮಾತನಾಡಿ “ಕರಾವಳಿ ಸಂಜೆ 7 ಗಂಟೆಯ ಬಳಿಕ ಸ್ಥಬ್ಧವಾಗುತ್ತದೆ ಎಂಬುದು ಉಪಮುಖ್ಯಮಂತ್ರಿಗಳ ತಪ್ಪು ಕಲ್ಪನೆ. ನಮ್ಮ ತುಳುನಾಡಿನ ಪರಂಪರೆಗಳಾದ ಯಕ್ಷಗಾನ, ನೇಮ, ನಾಟಕ ಹೀಗೆ ವಿವಿಧ ಚಟುವಟಿಕೆಗಳು ಗ್ರಾಮಾಂತರ ಪ್ರದೇಶದಲ್ಲಿ ನಡೆಯುತ್ತಲೇ ಇರುತ್ತದೆ“ ಎಂದರು.
”ಜಿಲ್ಲೆಯಲ್ಲಿ ಮಾದಕ ದ್ರವ್ಯ ಜಾಲವನ್ನು ಭೇದಿಸದೆ ಹೋದಲ್ಲಿ ಯುವ ಜನಾಂಗ ದಾರಿ ತಪ್ಪುವ ಆತಂಕವಿದೆ, ಶಿಕ್ಷಣ ಸಂಸ್ಥೆಗಳ ವಿದ್ಯಾರ್ಥಿಗಳ ಭವಿಷ್ಯದ ನಿಟ್ಟಿನಲ್ಲಿ ಗಂಭೀರ ಕ್ರಮದ ಅಗತ್ಯವಿದೆ.
ಇನ್ನು ಕರಾವಳಿ ಅಭಿವೃದ್ಧಿಗೆ ಐಟಿಬಿಟಿ ಪ್ರಮುಖ ಯೋಜನೆಯಾಗಿದೆ. ಸರಳ ರೀತಿಯಲ್ಲಿ ಅನುಷ್ಠಾನಕ್ಕೆ ಸರಕಾರ ಅಗತ್ಯ ಕ್ರಮ ತೆಗೆದುಕೊಳ್ಳಬೇಕು“ ಎಂದವರು ಒತ್ತಾಯಿಸಿದರು.
”ಕೇರಳದಲ್ಲಿ ಆಯುಷ್ಮಾನ್ ದಾಖಲೆಗಳು ಬಳಕೆಯಾಗುತ್ತಿದ್ದರೆ, ಕರ್ನಾಟಕದಲ್ಲಿ 70 ವರ್ಷ ಮೇಲ್ಪಟ್ಟ ಹಿರಿಯ ನಾಗರಿಕರಿಗೆ ಆಯುಷ್ಮಾನ್ ಸೌಲಭ್ಯ ದೊರಕುತ್ತಿಲ್ಲ.
ಸರಕಾರ ಈ ಬಗ್ಗೆ ಚಿಂತಿಸಬೇಕು. ನದಿ ಮಾಲಿನ್ಯ ತಡೆಗೆ ಒಳಚರಂಡಿ ಸಂಸ್ಕರಣ ಘಟಕಗಳು ಮೇಲ್ದರ್ಜೆಗೆ ಏರಿಸಬೇಕು.
ದಿನದ 24 ಗಂಟೆ ವಿದ್ಯುತ್ ವ್ಯವಸ್ಥೆ, ಮೋಟಾರ್ ಪಂಪ್ ಗಳ ವ್ಯವಸ್ಥೆ ಬಳಕೆಯ ದ ನೀರನ್ನ ಬೃಹತ್ ಕಂಪನಿಗಳು ಬಳಸುಕೊಳ್ಳುವ ಯೋಜನೆ, ದೊರಕಿದಾಗ ಸ್ವಚ್ಛತೆಗೆ ಆದ್ಯತೆ ನೀಡಲು ಸಾಧ್ಯವಾಗುತ್ತದೆ“ ಎಂದವರು ಸದನದ ಗಮನ ಸೆಳೆದರು.
ಹರೀಶ್ ಪೂಂಜಾ ಅವರು ನದಿ ಪ್ರವಾಸೋದ್ಯಮದ, ಹೈಕೋರ್ಟ್ ಪೀಠದ ಪ್ರಾಮುಖ್ಯತೆ ಕುರಿತಂತೆ ಗಮನ ಸೆಳೆದರು. ಕರಾವಳಿ ಜಿಲ್ಲೆಯ ಅಭಿವೃದ್ಧಿ ಹಾಗೂ ಸಮಸ್ಯೆಗಳ ಚರ್ಚೆಗೆ ಅವಕಾಶ ಮಾಡಿಕೊಟ್ಟ ಸಭಾಧ್ಯಕ್ಷ ಯು.ಟಿ. ಖಾದರ್ ಅವರಿಗೆ ಶಾಸಕರು ಇದೇ ಸಂದರ್ಭದಲ್ಲಿ ಶಾಸಕರು ಕೃತಜ್ಞತೆ ವ್ಯಕ್ತಪಡಿಸಿದರು.