ಮಂಗಳೂರಲ್ಲಿ ಗಾಳಿ-ಮಳೆಗೆ ಅಪಾರ ಹಾನಿ

ಮಂಗಳೂರು: ನಗರದಲ್ಲಿ ಬುಧವಾರ ಮುಂಜಾನೆ ಸುರಿದ ಭಾರೀ ಗಾಳಿ-ಮಳೆಗೆ ಕೊಟ್ಟಾರ ಚೌಕಿ ಸಮೀಪ ಬೃಹತ್ ಗಾತ್ರದ ಮರ ಹಾಗೂ ವಿದ್ಯುತ್ ಕಂಬವೊಂದು ಗ್ಯಾರೇಜ್ ಮೇಲೆ ಮುರಿದು ಬಿದ್ದ ಪರಿಣಾಮ ಮೂರು ಚತುಷ್ಚಕ್ರ ವಾಹನಗಳು ಜಖಂಗೊಂಡಿದ್ದು, ಕಟ್ಟಡಕ್ಕೂ ಅಪಾರ ಹಾನಿಯಾಗಿದೆ.

ಮುಂಜಾನೆ ಸುಮಾರು 2.15ರ ವೇಳೆಗೆ ಬೀಸಿದ ಬಿರುಗಾಳಿಯಿಂದ ಈ ಘಟನೆ ಸಂಭವಿಸಿದೆ. ಗ್ಯಾರೇಜ್‌ನ ಮೇಲ್ಭಾಗದಲ್ಲಿದ್ದ ವಾಚ್‌ಮನ್ ಕೊಠಡಿಯೂ ಹಾನಿಗೊಳಗಾಗಿದೆ. ಅದೃಷ್ಟವಶಾತ್ ಘಟನೆಯಲ್ಲಿ ಯಾವುದೇ ಜೀವಹಾನಿ ಸಂಭವಿಸಿಲ್ಲ.

Advt

ಮರ ಹಾಗೂ ವಿದ್ಯುತ್ ಕಂಬ ಬಿದ್ದ ಪರಿಣಾಮ ಗ್ಯಾರೇಜ್‌ನಲ್ಲಿದ್ದ ಮೂರು ವಾಹನಗಳು ಜಖಂಗೊಂಡಿವೆ. ಕಟ್ಟಡ ಹಾಗೂ ವಾಹನಗಳಿಗೆ ಸೇರಿ ಸುಮಾರು 4ರಿಂದ 5 ಲಕ್ಷ ರೂ. ನಷ್ಟ ಸಂಭವಿಸಿದೆ ಎಂದು ಕಟ್ಟಡದ ಮಾಲಕರು ತಿಳಿಸಿದ್ದಾರೆ.

ಘಟನೆಯಿಂದ ವಿದ್ಯುತ್ ಕಂಬ ಹಾನಿಗೊಂಡ ಹಿನ್ನೆಲೆಯಲ್ಲಿ ಮೆಸ್ಕಾಂ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಮುನ್ನೆಚ್ಚರಿಕೆ ಕ್ರಮವಾಗಿ ವಿದ್ಯುತ್ ಸಂಪರ್ಕವನ್ನು ಸ್ಥಗಿತಗೊಳಿಸಿದ ಅಧಿಕಾರಿಗಳು, ಬಳಿಕ ಹೊಸ ವಿದ್ಯುತ್ ಕಂಬ ಅಳವಡಿಸಿ ಸ್ಥಳೀಯರಿಗೆ ವಿದ್ಯುತ್ ಸಂಪರ್ಕವನ್ನು ಮರು ಕಲ್ಪಿಸಿದರು.

error: Content is protected !!