ಪುತ್ತೂರಿನಲ್ಲಿ ಸ್ವಯಂ ಪ್ರೇರಿತ ಕೇಸು, ಬಂಟ್ವಾಳದಲ್ಲಿ ಮೌನ ಯಾಕೆ? ಡಾ. ಭರತ್ ಶೆಟ್ಟಿ ಪ್ರಶ್ನೆ

ಮಂಗಳೂರು: ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಕುಸಿದಿದೆ. ಒಂದೆಡೆ ಕ್ರಮ, ಇನ್ನೊಂದೆಡೆ ಮೌನ ಎಂಬ ಸರ್ಕಾರದ ದ್ವಂದ್ವ ನೀತಿ ಜನರಲ್ಲಿ ಆತಂಕ ಮೂಡಿಸಿದೆ ಎಂದು ಶಾಸಕ ಡಾ. ವೈ. ಭರತ್ ಶೆಟ್ಟಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಇತ್ತೀಚೆಗೆ ಪುತ್ತೂರಿನಲ್ಲಿ ಯುವತಿಯೊಬ್ಬಳಿಗೆ ಚೂರಿ ಇರಿಯಲು ಯತ್ನಿಸಿದ ಪ್ರಕರಣದಲ್ಲಿ ವಿನಾಕಾರಣ ಸಾಮಾಜಿಕ ಗೊಂದಲ ಸೃಷ್ಟಿಸುತ್ತಿದ್ದಾರೆ ಎಂಬ ಕಾರಣಕ್ಕೆ ಹಲವರ ಮೇಲೆ ಸ್ವಯಂ ಪ್ರೇರಿತ ಕೇಸು ದಾಖಲಿಸಲಾಗಿದೆ. ಆದರೆ ಬಂಟ್ವಾಳದಲ್ಲಿ ಹಾಡುಹಗಲೇ ಯುವತಿಯ ಬರ್ಬರ ಹತ್ಯೆ ನಡೆದ ಬಳಿಕ ಹಿಂದೂ ಸಂಘಟನೆ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಬೇಕಾ ಬಿಟ್ಟಿ ಬರೆದು
ಫಾರ್ವಾರ್ಡ್ ಮಾಡಲಾಗುತ್ತಿದೆ.

ಬಂಟ್ವಾಳ ಕೊಲೆ ಪ್ರಕರಣದಲ್ಲಿ ಆರೋಪಿತ ಯುವಕನನ್ನು ಹಿಂದೂ ಸಂಘಟನೆಗೆ ಹೋಲಿಸಿ ಮಸಿ ಬಳಿಯುವ ಯತ್ನ ನಡೆಯುತ್ತಿದೆ. ಕೋಮು ವೈಷಮ್ಯ ಬಿತ್ತುವಂತಹ ಸಂದೇಶಗಳು ವಾಟ್ಸಾಪ್ ಸೇರಿದಂತೆ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ.

ಇಂತಹ ಸಂದರ್ಭದಲ್ಲಿ ಸರ್ಕಾರ, ಗ್ರಹ ಸಚಿವರು ಕ್ರಮ ತೆಗೆದುಕೊಳ್ಳದೆ ಮೌನವಾಗಿರುವುದು ಖಂಡನೀಯ ಎಂದು ಅವರು ಹೇಳಿದರು.
ರಾಜ್ಯದಲ್ಲಿ ಅಪರಾಧ ಪ್ರಕರಣ ಹೆಚ್ಚುತ್ತಿದ್ದು ಹೆಣ್ಣು ಮಕ್ಕಳು, ಸಾಮಾನ್ಯ ಜನರು ರಸ್ತೆಯಲ್ಲಿ ನಿರ್ಭಯವಾಗಿ ಓಡಾಡಲು ಆಗುತ್ತಿಲ್ಲ. ಸರಕಾರದ ಆಡಳಿತ ನಡೆಸುವಲ್ಲಿ ವಿಫಲ ವಾಗಿದೆ ಎಂದು ಟೀಕಿಸಿದ್ದಾರೆ.

error: Content is protected !!