ರೋಟರಿ ಕ್ಲಬ್ ಮಂಗಳೂರು ಸೆಂಟ್ರಲ್‌ ಗೆ “ಡೈಮಂಡ್ ಪ್ಲಸ್” ಎಕ್ಸಲೆನ್ಸ್ ಅವಾರ್ಡ್ ಸಮಗ್ರ ಪ್ರಶಸ್ತಿ

ಮಂಗಳೂರು: “2025- 26ನೇ ಸಾಲಿನಲ್ಲಿ ಸಮಾಜಮುಖಿ ಸೇವೆ, ಸದಸ್ಯತ್ವ ಅಭಿವೃದ್ಧಿ, ಪ್ರಕೃತಿ, ಪರಿಸರ, ಆರೋಗ್ಯ, ಶಿಕ್ಷಣ, ನೆಲ ಜಲ- ಪರಿಸರ ಸಂರಕ್ಷಣೆ, ಕೃಷಿ, ಕಲೆ ಸಾಹಿತ್ಯ ಸಂಸ್ಕೃತಿ, ಕ್ರೀಡೆ, ಕಂಬಳ, ಸಮುದಾಯ ಕಲ್ಯಾಣ, ಅಂಗನವಾಡಿ, ವೃದ್ಧಾಶ್ರಮ, ಮಹಿಳಾ ಮತ್ತು ಮಕ್ಕಳ ಆರೋಗ್ಯ, ಎಂ.ಎಸ್.ಎಂ.ಇ. ಮೂಲಕ ಸ್ವ ಉದ್ಯೋಗ, ಕೈಗಾರಿಕೆ ಉದ್ಯಮಗಳಿಗೆ ಪ್ರೋತ್ಸಾಹ, ಶುದ್ಧ ಕುಡಿಯುವ ನೀರಿನ ಆದ್ಯತೆ, ವಿವಿಧ ಇಲಾಖೆಗಳ ಸಹಯೋಗದಲ್ಲಿ ಸಮಾಜಮುಖಿ ಕೆಲಸಗಳು ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಕೈಗೊಂಡ ಅನೇಕ ಜನಪರ ಸೇವಾ ಕಾರ್ಯಕ್ರಮಗಳನ್ನು ಪರಿಗಣಿಸಿ ರೋಟರಿ ಅಂತಾರಾಷ್ಟ್ರೀಯ ಜಿಲ್ಲೆ 3181ರ ಜಿಲ್ಲಾ ಅತ್ಯುತ್ತಮ ಪ್ರಶಸ್ತಿಯಾದ “ಡೈಮಂಡ್ ಪ್ಲಸ್”ನ್ನು ರೋಟರಿ ಕ್ಲಬ್ ಮಂಗಳೂರು ಸೆಂಟ್ರಲ್ ಮುಡಿಗೇರಿಸಿಕೊಂಡಿದೆ“ ಎಂದು ಅಧ್ಯಕ್ಷ ರೊ.ಭಾಸ್ಕರ್ ರೈ ಕಟ್ಟ ಪತ್ರಿಕಾಗೋಷ್ಟಿಯಲ್ಲಿ ಹೇಳಿದರು.
ಮೈಸೂರಿನಲ್ಲಿ ಇತ್ತೀಚೆಗೆ ನಡೆದ, ಮೈಸೂರು, ಚಾಮರಾಜನಗರ, ಮಡಿಕೇರಿ, ದಕ್ಷಿಣ ಕನ್ನಡ ಜಿಲ್ಲೆಗಳನ್ನು ಒಳಗೊಂಡ ರೋಟರಿ ಜಿಲ್ಲಾ 3181 ಜಿಲ್ಲಾ ಮಟ್ಟದ ಅನುಬಂಧ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ರೋಟರಿ ಮಂಗಳೂರು ಸೆಂಟ್ರಲ್ ಅಧ್ಯಕ್ಷರಾದ ಭಾಸ್ಕರ್ ರೈ ಕಟ್ಟ ಮತ್ತು ಕ್ಲಬ್ ನ ಸದಸ್ಯರು ಈ ಪ್ರಶಸ್ತಿಯನ್ನು ಸ್ವೀಕರಿಸಿದರು.
ರೋಟರಿ ಕ್ಲಬ್‌ಗಳ ಸೇವಾ ಬದ್ಧತೆ, ಸಮುದಾಯ ಕಲ್ಯಾಣ ಕಾರ್ಯ ಚಟುವಟಿಕೆಗಳನ್ನು ಪರಿಗಣಿಸಿ ಈ ಪ್ರತಿಷ್ಠಿತ ಪ್ರಶಸ್ತಿಗೆ ರೋಟರಿ ಕ್ಲಬ್ ಮಂಗಳೂರು ಸೆಂಟ್ರಲ್‌ನ್ನು ಆಯ್ಕೆ ಮಾಡಲಾಗಿತ್ತು. ರೋಟರಿ ಕ್ಲಬ್ ಮಂಗಳೂರು ಸೆಂಟ್ರಲ್‌ನ 40 ವರ್ಷಗಳ ಇತಿಹಾಸದಲ್ಲೇ ಪ್ರಥಮ ಬಾರಿಗೆ ಈ ಡೈಮಂಡ್ ಪ್ಲಸ್ ಪ್ರಶಸ್ತಿ ದೊರೆತಿದೆ.
ಎಂಟು ದೇಶಗಳ 45 ಜಿಲ್ಲೆಗಳಲ್ಲಿ ಆತಿಥ್ಯ ವಹಿಸಿ ರೋಟರಾಕ್ಟ್ ಸಂಸ್ಥೆಗಳ ಪ್ರಶಸ್ತಿ ಪ್ರದಾನ ಹಾಗೂ ಪದಗ್ರಹಣ ಕಾರ್ಯಕ್ರಮ ನೆರವೇರಿಸಿದ ಕಾರಣಕ್ಕಾಗಿ ರೋಟರಾಕ್ಟ್ ದಕ್ಷಿಣ ಏಷ್ಯಾ ಅಧ್ಯಕ್ಷ ಡೆರಿಲ್ ಸ್ಟೀವನ್ ಡಿಸೋಜ ಅವರಿಗೆ ವಿಶೇಷ ಪ್ರಶಸ್ತಿಯನ್ನು ಪ್ರದಾನ ಮಾಡಿ ಗೌರವಿಸಲಾಯಿತು.

ರೋಟರಿ ಕ್ಲಬ್ ಮಂಗಳೂರು ಸೆಂಟ್ರಲ್‌ ಗೃಹ ವಾರ್ತಾ ಪತ್ರಿಕೆ “ಸೆಂಟೋರ್”ಗೆ ಬುಲೆಟಿನ್ ಎಕ್ಸಲೆನ್ಸ್ ಪ್ರಶಸ್ತಿ, ರೋಟರಿ ಜಿಲ್ಲೆಯಲ್ಲಿ ಅತಿ ಹೆಚ್ಚು ಸದಸ್ಯರನ್ನು ನೋಂದಣಿ ಮಾಡಿದ ಸಾಧನೆಗಾಗಿ ರೀಚ್ ಎಕ್ಸಲೆನ್ಸ್ ಪ್ರಶಸ್ತಿ, ಅತಿ ಹೆಚ್ಚಿನ ಯೋಜನೆಗಳನ್ನು ಯಶಸ್ವಿಯಾಗಿ ನಿರ್ವಹಿಸಿದಕ್ಕಾಗಿ ಹೈಯೆಸ್ಟ್ ಪ್ರಾಜೆಕ್ಟ್ ಪ್ರಶಸ್ತಿ, ಪಲ್ಸ್ ಪೋಲಿಯೊ ಲಸಿಕಾ ಕಾರ್ಯಕ್ರಮಕ್ಕೆ ಆರ್ಥಿಕ ನೆರವು ನೀಡಿದ್ದಕ್ಕೆ ವಿಶೇಷ ಪ್ರಶಸ್ತಿ, ಸಾರ್ವಜನಿಕ ಗೌರವ ವೃದ್ಧಿ ಸೇರಿದಂತೆ ಸಮಗ್ರ ಪ್ರಶಸ್ತಿಯನ್ನು ರೋಟರಿ ಕ್ಲಬ್ ಮಂಗಳೂರು ಸೆಂಟ್ರಲ್ ಮುಡಿಗೇರಿಸಿಕೊಂಡಿದೆ.
ಈ ಪ್ರಶಸ್ತಿಯು ರೋಟರಿ ಕ್ಲಬ್ ಮಂಗಳೂರು ಸೆಂಟ್ರಲ್‌ನ ಸದಸ್ಯರೆಲ್ಲರ ಸಮರ್ಪಣಾ ಮನೋಭಾವ, ಸಾಮಾಜಿಕ ಸೇವಾ ತುಡಿತ, ಒಗ್ಗಟ್ಟಿನ ಪ್ರತೀಕವಾಗಿದೆ.
ಪತ್ರಿಕಾಗೋಷ್ಟಿಯಲ್ಲಿ ಕಾರ್ಯದರ್ಶಿ ರೊ.ವಿಕಾಸ್ ಕೋಟ್ಯಾನ್, ದೇವದಾಸ್ ರೈ, ಚೆನ್ನಗಿರಿ ಗೌಡ, ಸಾಯಿಬಾಬಾ ರಾವ್, ರಾಜೇಶ್ ಶೆಟ್ಟಿ, ರಾಜ್ ಗೋಪಾಲ್ ರೈ ಮತ್ತಿತರರು ಉಪಸ್ಥಿತರಿದ್ದರು.

error: Content is protected !!