
ಮಂಗಳೂರು: ವ್ಯಕ್ತಿ ನಿರ್ಮಾಣದ ಮೂಲಕ ರಾಷ್ಟ್ರ ನಿರ್ಮಾಣ ಎಂಬ ಮಹಾ ಸಂಕಲ್ಪದೊಂದಿಗೆ ಶತಮಾನ ಪೂರೈಸಿರುವ ಆರ್ಎಸ್ಎಸ್ ಅನ್ನು ರಾಜಕೀಯ ಶಕ್ತಿಯಿಂದ ನಿಯಂತ್ರಿಸುತ್ತೇನೆ ಎಂದುಕೊಳ್ಳುವುದು ಮೂರ್ಖತನದ ಪರಮಾವಧಿ. ನೂತನ ಗೃಹಸಚಿವ ಪ್ರಿಯಾಂಕ್ ಖರ್ಗೆಯವರು ಇನ್ನಾದರೂ ಕ್ಷುಲ್ಲಕ ಹೇಳಿಕೆಗಳ ಬದಲು ರಾಜ್ಯದ ನೈಜ ಸಮಸ್ಯೆ ಬಗ್ಗೆ ಗಮನ ಹರಿಸಲಿ ಎಂದು ಶಾಸಕ ವೇದವ್ಯಾಸ ಕಾಮತ್ ರವರು ಆಗ್ರಹಿಸಿದರು.
ಆಕಸ್ಮಿಕವಾಗಿ ಗೃಹ ಸಚಿವರಾಗಿರುವ ಪ್ರಿಯಾಂಕ್ ಖರ್ಗೆಯವರಿಗೆ, ತಾನು ಕಾಂಗ್ರೆಸ್ಸಿನ ರಾಷ್ಟ್ರೀಯ ಅಧ್ಯಕ್ಷರ ಮಗ ಎಂಬುದನ್ನು ಪದೇ ಪದೇ ನೆನಪಿಸುವ ಅನಿವಾರ್ಯತೆ ಬಂದಿರಬಹುದು. ತಮ್ಮ ಸ್ಥಾನವನ್ನು ಉಳಿಸಿಕೊಳ್ಳಬೇಕಾದ ಪರಿಸ್ಥಿತಿಯೂ ಇರಬಹುದು. ಹಾಗಾಗಿ ಆರ್ಎಸ್ಎಸ್ ವಿರುದ್ಧ ಏನಾದರೂ ಮಾತಾಡಿ ಹೈಕಮಾಂಡನ್ನು ತೃಪ್ತಿಪಡಿಸಲು ಪ್ರಯತ್ನಿಸುತ್ತಿದ್ದಾರೆ. ಸದಾ ದೇಶವಿರೋಧಿ ಸಂಘಟನೆಗಳಿಗೆ ಪರೋಕ್ಷವಾಗಿ ಬೆಂಬಲ ನೀಡುತ್ತಾ ಬಂದ ಕಾಂಗ್ರೆಸ್, ಇಂದು ರಾಷ್ಟ್ರಭಕ್ತ ಸಂಘಟನೆಯಾದ ಆರ್ಎಸ್ಎಸ್ ನೋಂದಣಿಯ ಕುರಿತು ಪ್ರಶ್ನೆ ಮಾಡುತ್ತಿರುವುದು ಹಾಸ್ಯಾಸ್ಪದ ಎಂದರು.
ಸಚಿವ ಖರ್ಗೆಯವರು, ಎಸ್.ಎಸ್.ಎಲ್.ಸಿ ಹಾಗೂ ಪಿಯುಸಿ ಫಲಿತಾಂಶಗಳಲ್ಲಿ ತಮ್ಮ ಜಿಲ್ಲೆ ಕೊನೆಯ ಸ್ಥಾನದಲ್ಲಿದಿರುವುದು, ಶಾಲಾ ಕಾಲೇಜುಗಳಲ್ಲಿ ಮೂಲಭೂತ ಸೌಕರ್ಯಗಳಿಲ್ಲದಿರುವುದು, ಶಿಥಿಲಗೊಂಡ ಮೇಲ್ಛಾವಣೆಗಳು ಕುಸಿದು ವಿದ್ಯಾರ್ಥಿನಿಯರು ಗಾಯಗೊಂಡಿರುವುದು, ಕಾನೂನು ಸುವ್ಯವಸ್ಥೆ ಹದಗೆಟ್ಟಿರುವುದರ ಬಗ್ಗೆ ಗಮನ ಹರಿಸಬೇಕಿತ್ತು. ಆದರೆ ದಾವಣಗೆರೆ ಉಪಚುನಾವಣೆ ನಂತರ ಜಮೀರ್ ಅಹಮದ್ ಗೆ ಸಚಿವ ಸ್ಥಾನ ತಪ್ಪಿದ ಕಾರಣಕ್ಕೆ, ಅಲ್ಪಸಂಖ್ಯಾತ ಮತಗಳು ಕೈ ಬಿಟ್ಟು ಹೋಗುತ್ತಿರುವುದನ್ನು ತಡೆಯಲು ಆರ್ಎಸ್ಎಸ್ ಅನ್ನು ಟಾರ್ಗೆಟ್ ಮಾಡಿಕೊಂಡಿರುವುದು ಹತಾಶೆಯ ಸಂಕೇತ ಎಂದರು.
