ಬಂಟ್ವಾಳ: ಮೆಸ್ಕಾಂ ಸಿಬ್ಬಂದಿ ಹೃದಯಾಘಾತಕ್ಕೆ ಬಲಿ


ಬಂಟ್ವಾಳ: ಕರ್ತವ್ಯ ನಿರ್ವಹಿಸುತ್ತಿದ್ದ ಸಂದರ್ಭದಲ್ಲೇ ಮೆಸ್ಕಾಂ ಉದ್ಯೋಗಿಯೊಬ್ಬರು ಹೃದಯಾಘಾತದಿಂದ ಮೃತಪಟ್ಟ ದುರ್ಘಟನೆ ಬಂಟ್ವಾಳ ತಾಲೂಕಿನ ಪಾಣೆಮಂಗಳೂರು ಸಮೀಪದ ಶಂಭೂರು ಪ್ರದೇಶದಲ್ಲಿ ನಡೆದಿದೆ. ಮೂಲತಃ ಮಿತ್ತೂರು ನಿವಾಸಿ 55 ವರ್ಷ ಪ್ರಾಯದ ಚಂದ್ರಶೇಖರ ನಾಯ್ಕ ಮೃತಪಟ್ಟವರು. ಅವರು ಮೆಸ್ಕಾಂ ಪಾಣೆಮಂಗಳೂರು ಶಾಖೆಯಲ್ಲಿ ಸಹಾಯಕ ಮೆಕ್ಯಾನಿಕ್ ಆಗಿ ಸೇವೆ ಸಲ್ಲಿಸುತ್ತಿದ್ದರು.
ಜೂನ್ 9ರಂದು ಮಂಗಳವಾರ ಮಧ್ಯಾಹ್ನ ಶಂಭೂರು ಸಮೀಪದ ಕುಂದಾಯಗೋಳಿ ಪ್ರದೇಶದಲ್ಲಿ ವಿದ್ಯುತ್ ಕಂಬವೊಂದು ತುಂಡಾಗಿ ಬಿದ್ದ ಪರಿಣಾಮ ವಿದ್ಯುತ್ ಸಂಪರ್ಕ ಕಡಿತಗೊಂಡಿತ್ತು. ಮಾಹಿತಿ ಪಡೆದ ಚಂದ್ರಶೇಖರ ನಾಯ್ಕ ಹಾಗೂ ಸಿಬ್ಬಂದಿ ಸ್ಥಳಕ್ಕೆ ತೆರಳಿ ಹೊಸ ಕಂಬ ಅಳವಡಿಸಿ ವಿದ್ಯುತ್ ತಂತಿಗಳನ್ನು ಎಳೆದು ಸಂಪರ್ಕ ಮರುಸ್ಥಾಪನೆ ಮಾಡುವ ಕಾರ್ಯವನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದ್ದರು.
ಇದಾದ ಬಳಿಕ ಇಲಾಖೆಗೆ ಸಂಬಂಧಿಸಿದ ಮತ್ತೊಂದು ತುರ್ತು ಸಮಸ್ಯೆಯ ಬಗ್ಗೆ ಕರೆ ಬಂದ ಹಿನ್ನೆಲೆಯಲ್ಲಿ ಸಹೋದ್ಯೋಗಿಗಳೊಂದಿಗೆ ಬೈಕ್‌ನಲ್ಲಿ ತೆರಳುತ್ತಿದ್ದ ವೇಳೆ ಕುಂದಾಯಗೋಳಿ ಸಮೀಪ ಏಕಾಏಕಿ ಅಸ್ವಸ್ಥಗೊಂಡು ರಸ್ತೆಗೆ ಕುಸಿದು ಬಿದ್ದಿದ್ದಾರೆ. ತಕ್ಷಣ ಅವರನ್ನು ಬಿ.ಸಿ. ರೋಡಿನ ಖಾಸಗಿ ಆಸ್ಪತ್ರೆಗೆ ಸಾಗಿಸಲಾಯಿತಾದರೂ, ಪರೀಕ್ಷಿಸಿದ ವೈದ್ಯರು ಹೃದಯಾಘಾತದಿಂದ ಅವರು ಮೃತಪಟ್ಟಿರುವುದಾಗಿ ತಿಳಿಸಿದ್ದಾರೆ ಎಂದು ಮೂಲಗಳು ಮಾಹಿತಿ ನೀಡಿವೆ.
ಕರ್ತವ್ಯನಿಷ್ಠೆ ಮತ್ತು ಸರಳ ಸ್ವಭಾವದಿಂದ ಸಹೋದ್ಯೋಗಿಗಳ ಮೆಚ್ಚುಗೆಗೆ ಪಾತ್ರರಾಗಿದ್ದ ಚಂದ್ರಶೇಖರ ನಾಯ್ಕ ಅವರ ಅಕಾಲಿಕ ನಿಧನವು ಕುಟುಂಬಸ್ಥರು, ಸ್ನೇಹಿತರು ಹಾಗೂ ಮೆಸ್ಕಾಂ ಸಿಬ್ಬಂದಿ ವರ್ಗದಲ್ಲಿ ದುಃಖದ ಛಾಯೆ ಮೂಡಿಸಿದೆ. ಮೃತರು ಪತ್ನಿ, ಇಬ್ಬರು ಪುತ್ರರು ಸೇರಿದಂತೆ ಅಪಾರ ಬಂಧು-ಬಳಗವನ್ನು ಅಗಲಿದ್ದಾರೆ.

error: Content is protected !!