ಕೇಂದ್ರ ಶಿಕ್ಷಣ ಸಚಿವರ ರಾಜೀನಾಮೆಗೆ ಆಗ್ರಹಿಸಿ ಜೂ.6ರಂದು ಜಿರಳೆಗಳ ಬೃಹತ್ ಪ್ರತಿಭಟನೆ!

ನವದೆಹಲಿ: ದೇಶದಲ್ಲಿ ಸರಣಿಯಾಗಿ ನಡೆದಿರುವ ಪ್ರಮುಖ ಸ್ಪರ್ಧಾತ್ಮಕ ಪರೀಕ್ಷೆಗಳ ಅಕ್ರಮ ಹಾಗೂ ಗೊಂದಲಗಳಿಂದ ವಿದ್ಯಾರ್ಥಿ ಸಮೂಹ ತೀವ್ರ ಆತಂಕಕ್ಕೆ ಒಳಗಾಗಿರುವ ಬೆನ್ನಲ್ಲೇ, ಕೇಂದ್ರ ಸರ್ಕಾರದ ವಿರುದ್ಧ ಬೃಹತ್ ಪ್ರತಿಭಟನೆಗೆ ವೇದಿಕೆ ಸಿದ್ಧವಾಗುತ್ತಿದೆ. ದೇಶಾದ್ಯಂತ ಲಕ್ಷಾಂತರ ಯುವಕರ ಬೆಂಬಲ ಹೊಂದಿರುವ ʻಕಾಕ್ರೋಚ್ ಜನತಾ ಪಾರ್ಟಿ’ (CJP) ಚಳವಳಿಯ ಸಂಸ್ಥಾಪಕ ಅಭಿಜೀತ್ ದೀಪ್ಕೆ, ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರ ರಾಜೀನಾಮೆಗೆ ಆಗ್ರಹಿಸಿ ಜೂನ್ 6 ರಂದು ದೆಹಲಿಯಲ್ಲಿ ಶಾಂತಿಯುತ ಪ್ರತಿಭಟನೆ ನಡೆಸುವುದಾಗಿ ಪ್ರಕಟಿಸಿದ್ದಾರೆ.

ಸದ್ಯ ಅಮೆರಿಕದಲ್ಲಿರುವ ಅಭಿಜೀತ್ ದೀಪ್ಕೆ ಸೋಮವಾರ ತಮ್ಮ ಅಧಿಕೃತ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ವೀಡಿಯೋವೊಂದನ್ನು ಹಂಚಿಕೊಳ್ಳುವ ಮೂಲಕ ಈ ಹೋರಾಟದ ನೀಲನಕ್ಷೆಯನ್ನು ಬಿಡುಗಡೆ ಮಾಡಿದ್ದಾರೆ. “ದೇಶದ ಭವಿಷ್ಯವಾಗಿರುವ ವಿದ್ಯಾರ್ಥಿಗಳನ್ನು ಜಾಗತಿಕ ಪರೀಕ್ಷಾ ವಿವಾದಗಳು ಮತ್ತು ಗೊಂದಲಗಳು ತೀವ್ರ ಆತಂಕಕ್ಕೆ ದೂಡಿವೆ. ಈ ಹಿನ್ನೆಲೆಯಲ್ಲಿ ಸರ್ಕಾರ ಉತ್ತರದಾಯಿತ್ವ ಪ್ರದರ್ಶಿಸಬೇಕಿದೆ. ನಾವೆಲ್ಲರೂ ಭಾರತದ ಸಂವಿಧಾನದ ಹಾದಿಯಲ್ಲಿ ನಡೆದು, ಒಟ್ಟಾಗಿ ಧ್ವನಿ ಎತ್ತಿ ಶಿಕ್ಷಣ ಸಚಿವರ ರಾಜೀನಾಮೆಯನ್ನು ಒತ್ತಾಯಿಸುವ ಸಮಯ ಬಂದಿದೆ. ನಾವು ಒಗ್ಗಟ್ಟಾಗಿ ಧ್ವನಿ ಎತ್ತಿದರೆ ಸರ್ಕಾರ ಖಂಡಿತಾ ನಮ್ಮ ಮಾತನ್ನು ಕೇಳಲೇಬೇಕು,” ಎಂದು ಅವರು ವಿದ್ಯಾರ್ಥಿಗಳಿಗೆ ಮತ್ತು ಯುವ ಜನತೆಗೆ ಕರೆ ನೀಡಿದ್ದಾರೆ.

ತಮ್ಮ ಹೋರಾಟದ ಯೋಜನೆಯನ್ನು ಹಂಚಿಕೊಂಡಿರುವ ದೀಪ್ಕೆ, “ನಾನು ಜೂನ್ 6 ರ ಶನಿವಾರ ಬೆಳಿಗ್ಗೆ ಅಮೆರಿಕದಿಂದ ನೇರವಾಗಿ ದೆಹಲಿಯ ಇಂದಿರಾಗಾಂಧಿ ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ (IGI Airport) ಬಂದು ತಲುಪಲಿದ್ದೇನೆ. ಬೆಂಬಲಿಗರು ಮತ್ತು ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ವಿಮಾನ ನಿಲ್ದಾಣದಲ್ಲೇ ನನ್ನನ್ನು ಜಂಟಿಯಾಗಿ ಸೇರಿಕೊಳ್ಳಬೇಕು. ಅಲ್ಲಿಂದ ನಾವೆಲ್ಲರೂ ಒಟ್ಟಾಗಿ ಪಾರ್ಲಿಮೆಂಟ್ ಸ್ಟ್ರೀಟ್ ಪೊಲೀಸ್ ಠಾಣೆಗೆ ತೆರಳಿ, ಜಂಟರ್ ಮಂತರ್‌ನಲ್ಲಿ ಶಾಂತಿಯುತ ಪ್ರತಿಭಟನೆ ನಡೆಸಲು ಅಧಿಕೃತ ಅನುಮತಿ ಕೋರಲಿದ್ದೇವೆ,” ಎಂದು ತಿಳಿಸಿದ್ದಾರೆ.

error: Content is protected !!