ಕುಂದಾಪುರ: ತಾಲೂಕಿನ ಅಜ್ರಿ ಗ್ರಾಮದ ಉಮಾಮಹೇಶ್ವರ ದೇವಸ್ಥಾನದಲ್ಲಿ ನಡೆದ ಕಳ್ಳತನ ಪ್ರಕರಣವನ್ನು ಶಂಕರನಾರಾಯಣ ಪೊಲೀಸರು ಯಶಸ್ವಿಯಾಗಿ ಭೇದಿಸಿದ್ದು, ಇಬ್ಬರು ಆರೋಪಿಗಳನ್ನು ಬಂಧಿಸಿ, ಸುಮಾರು 1.5 ಲಕ್ಷ ರೂಪಾಯಿ ಮೌಲ್ಯದ ಸೊತ್ತನ್ನು ವಶಕ್ಕೆ ಪಡೆದುಕೊಂಡಿದ್ದಾರೆ.

ಕುಂದಾಪುರ ತಾಲೂಕಿನ ಕಮಲಶಿಲೆಯ ಮಠದಮನೆ ನಿವಾಸಿ ಸಂದೀಪ ಆಚಾರಿ (28) ಹಾಗೂ ಕೊಪ್ಪಳ ಜಿಲ್ಲೆಯ ಕುಷ್ಟಗಿ ತಾಲೂಕಿನ ಬನಹಟ್ಟಿ ನಿವಾಸಿ ಮುತ್ತಪ್ಪ ಶರಣಪ್ಪ ವಾಲೀಕಾರ (40) ಬಂಧಿತ ಆರೋಪಿಗಳು.
ನಿಮ್ಮ ಕನಸು ನನಸಾಗಿಸಲು ಮೆಗಾ ಗೋಲ್ಡ್ ಸೇವಿಂಗ್ಸ್ ಸ್ಕೀಮ್ ಸೇರಿ
ಏಪ್ರಿಲ್ 20 ರಂದು ಬೆಳಿಗ್ಗೆ 7.56 ರ ಸುಮಾರಿಗೆ ದೇವಾಲಯದ ಹೊರ ಆವರಣಕ್ಕೆ ಬಂದ ಅಪರಿಚಿತ ಹೆಲ್ಮೆಟ್ ಧರಿಸಿದ ವ್ಯಕ್ತಿಯೊಬ್ಬರು ದೇವಾಲಯದ ಕಾಣಿಕೆ ಹುಂಡಿಯನ್ನು ಕದ್ದು ಸ್ಥಳದಿಂದ ಪರಾರಿಯಾಗಿದ್ದಾರೆ. ದೂರಿನ ಆಧಾರದ ಮೇಲೆ, ಶಂಕರನಾರಾಯಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕುಂದಾಪುರ ಉಪವಿಭಾಗದ ಪೊಲೀಸ್ ಉಪಾಧೀಕ್ಷಕ ಎಚ್.ಡಿ. ಕುಲಕರ್ಣಿ ಮತ್ತು ವೃತ್ತ ನಿರೀಕ್ಷಕ ಸಂತೋಷ್ ಎ. ಕಾಯ್ಕಿಣಿ ಅವರ ಮಾರ್ಗದರ್ಶನದಲ್ಲಿ, ಪಿಎಸ್ಐ (ಕಾನೂನು ಮತ್ತು ಸುವ್ಯವಸ್ಥೆ) ಐ.ಆರ್. ಗಡ್ಡೇಕರ್ ಮತ್ತು ಪಿಎಸ್ಐ (ತನಿಖೆ) ಕುಮಾರಿ ಅಕ್ಷಯ ಕುಮಾರಿ ಎಸ್.ಎನ್. ನೇತೃತ್ವದ ತಂಡವು, ಸಿಬ್ಬಂದಿಗಳಾದ ಸಚಿನ್ ಶೆಟ್ಟಿ, ಜಯರಾಮ್ ನಾಯ್ಕ್, ಚೇತನ್ ಕುಮಾರ್, ನವೀನ್ ನಾಯ್ಕ್, ಕುಂದಾಪುರ ಗ್ರಾಮೀಣ ಪೊಲೀಸ್ ಸಿಬ್ಬಂದಿ ಮೌನೇಶ್ ನಾಯ್ಕ್ ಮತ್ತು ಜಿಲ್ಲಾ ತಾಂತ್ರಿಕ ಕೋಶ ಅಧಿಕಾರಿ ದಿನೇಶ್ ಅವರೊಂದಿಗೆ ತನಿಖೆ ನಡೆಸಿದರು.

ಅಪರಾಧಕ್ಕೆ ಬಳಸಲಾದ ಮೋಟಾರ್ ಸೈಕಲ್, ಮೂರು ಮೊಬೈಲ್ ಫೋನ್ಗಳು ಮತ್ತು ಉಮಾಮಹೇಶ್ವರ ದೇವಸ್ಥಾನದಿಂದ ಕದ್ದ ಕಾಣಿಕೆ ಹುಂಡಿಯನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ವಶಪಡಿಸಿಕೊಂಡ ವಸ್ತುಗಳ ಒಟ್ಟು ಮೌಲ್ಯ ಸುಮಾರು 1,50,000 ರೂ. ಎಂದು ಅಂದಾಜಿಸಲಾಗಿದೆ.

ಆರೋಪಿಗಳನ್ನು ನ್ಯಾಯಾಲಯದ ಮುಂದೆ ಹಾಜರುಪಡಿಸಲಾಗಿದ್ದು, ನ್ಯಾಯಾಲಯವು ಅವರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದೆ.