ಸಂಸ್ಕೃತಿ ಉಳಿಸುವ ಸಿನಿಮಾಗಳಿಗೆ ಸರ್ಕಾರಿ ಪ್ರೋತ್ಸಾಹ ಅಗತ್ಯ: ನಟ ಸುಮನ್ ತಲ್ವಾರ್

ಕದ್ರಿ ದೇಗುಲದಲ್ಲಿ ಕೊರಗ್ಲಾ ತನಿಯ-ಕನ ಚಿತ್ರದ ಮಹೂರ್ತ ಸಮಾರಂಭ

ಮಂಗಳೂರು: ಪ್ರಾರ್ಥನಾ ಕ್ರಿಯೇಷನ್ಸ್ ಲಾಂಛನದಲ್ಲಿ ಡಾ. ಆರ್. ಧನರಾಜ್ ನಿರ್ದೇಶಿಸುತ್ತಿರುವ ʻಕೊರಗ್ಲಾ ತನಿಯಾʼ ಮತ್ತು ʻಕನʼ ಚಿತ್ರಗಳ ಮುಹೂರ್ತ ಸಮಾರಂಭ ಇಂದು ಕದ್ರಿ ಶ್ರೀ ಮಂಜುನಾಥೇಶ್ವರ ದೇವಸ್ಥಾನದ ನೆರವೇರಿತು.

ಈ ಪ್ರಯುಕ್ತ ದೇವಸ್ಥಾನದ ಆವರಣದಲ್ಲಿ ನಡೆದ ಸಭಾ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ ಭಹುಭಾಷಾ ನಟ ಸುಮನ್‌ ತಲ್ವಾರ್‌ ಮಾತನಾಡಿ, ಭಾಷೆ, ಸಂಪ್ರದಾಯ ಮತ್ತು ಸಂಸ್ಕೃತಿ ಜಗತ್ತಿಗೆ ಪರಿಚಯಿಸುವ ಸಿನಿಮಾಗಳಿಗೆ ಸರ್ಕಾರವು ಸಬ್ಸಿಡಿ ಮತ್ತು ತೆರಿಗೆ ವಿನಾಯಿತಿ ನೀಡಬೇಕು. ಆಗ ಮಾತ್ರ ಹೆಚ್ಚಿನ ನಿರ್ಮಾಪಕರು ಇಂತಹ ಕಥೆಗಳನ್ನು ತೆರೆಯ ಮೇಲೆ ತರಲು ಮುಂದೆ ಬರುತ್ತಾರೆ ಎಂದು ಅಭಿಪ್ರಾಯಪಟ್ಟರು.

ನಿಮ್ಮ ಕನಸು ನನಸಾಗಿಸಲು ಮೆಗಾ ಗೋಲ್ಡ್ ಸೇವಿಂಗ್ಸ್ ಸ್ಕೀಮ್ ಸೇರಿ

ಕಾಂತಾರ ಸಿನಿಮಾ ಬಂದ ಮೇಲೆ ಅನೇಕರು ಇಂತಹ ಪ್ರಯತ್ನಕ್ಕೆ ಕೈಹಾಕುತ್ತಿದ್ದಾರೆ. ಆದರೆ, ನಿರ್ದೇಶಕ ಧನರಾಜ್ ಅವರು 20 ವರ್ಷಗಳ ಹಿಂದೆಯೇ ಲಾಭ-ನಷ್ಟದ ಲೆಕ್ಕಾಚಾರವಿಲ್ಲದೆ ʻಕೋಟಿ ಚೆನ್ನಯ’ ಚಿತ್ರ ಮಾಡುವ ಮೂಲಕ ತುಳು ಚಿತ್ರರಂಗಕ್ಕೆ ದೊಡ್ಡ ಹೆಸರು ತಂದುಕೊಟ್ಟಿದ್ದರು. ಈಗ ಅವರು ʻಕೊರಗ್ಲಾ ತನಿಯಾ’, ಕನ ಚಿತ್ರದ ಮೂಲಕ ಮತ್ತೆ ಅಂತಹದ್ದೇ ಸಾಹಸಕ್ಕೆ ಮುಂದಾಗಿದ್ದಾರೆ. ಈ ಚಿತ್ರದ ಕಥೆ ತುಂಬಾ ಚೆನ್ನಾಗಿದ್ದು, ನಾನೂ ಕೂಡ ಇದರಲ್ಲಿ ಒಂದು ಪಾತ್ರ ಮಾಡುತ್ತಿದ್ದೇನೆ” ಎಂದು ಹರ್ಷ ವ್ಯಕ್ತಪಡಿಸಿದರು.

ಐದಾರು ಭಾಷೆಗಳಲ್ಲಿ ತುಳುನಾಡಿನ ಸಂಸ್ಕೃತಿಯನ್ನು ಬಿಂಬಿಸುವ ಸಿನಿಮಾ ನಿರ್ಮಾಣವಾಗುತ್ತಿರುವುದು ಹೆಮ್ಮೆಯ ವಿಚಾರ. ತುಳುನಾಡಿನವರಿಗೆ ಇಲ್ಲಿನ ಶಕ್ತಿ ಸರಿಯಾಗಿ ಗೊತ್ತಿಲ್ಲ. ಇಲ್ಲಿನವರು ಏಳೆಂಟು ಭಾಷೆಗಳನ್ನು ಬಲ್ಲವರು, ಅಂತಹ ಸಮೃದ್ಧ ಸಂಸ್ಕೃತಿಯನ್ನು ಉಳಿಸುವುದು ಇಂದಿನ ತುರ್ತು ಅಗತ್ಯವಾಗಿದೆ. ಈ ಚಿತ್ರಗಳಿಗೆ ಕೊರಗಜ್ಜ ಮತ್ತು ಕದ್ರಿ ಮಂಜುನಾಥನ ಆಶೀರ್ವಾದ ಸದಾ ಇರಲಿ ಎಂದು ಸುಮನ್ ಹಾರೈಸಿದರು.

ಜೆಡಿಎಸ್ ಮುಖಂಡ ಹಾಗೂ ಚಿಕ್ಕನಾಯಕನಹಳ್ಳಿ ಶಾಸಕ ಸುರೇಶ್ ಬಾಬು ಅವರು ದೀಪ ಬೆಳಗಿಸಿ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿ, “ನಿರ್ದೇಶಕ ಧನರಾಜ್ ಅವರು ಈಗಾಗಲೇ ರಾಷ್ಟ್ರಪ್ರಶಸ್ತಿ ವಿಜೇತ ಸಿನಿಮಾ ನೀಡಿರುವ ಪ್ರತಿಭಾವಂತರು. ಈ ‘ಕೊರಗ್ಲಾ ತನಿಯಾ’ ಚಿತ್ರವೂ ರಾಷ್ಟ್ರಮಟ್ಟದಲ್ಲಿ ಗುರುತಿಸಿಕೊಳ್ಳಲಿ. ಹಾಡುಗಳು ಮತ್ತು ಕಥೆಯ ಮೂಲಕ ಸಮಾಜವನ್ನು ತಿದ್ದುವ ಕೆಲಸ ಈ ಚಿತ್ರದಿಂದ ಆಗಲಿ,” ಎಂದು ಶುಭ ಹಾರೈಸಿದರು.

ಚಿತ್ರದ ನಿರ್ದೇಶಕ ಹಾಗೂ ನಿರ್ಮಾಪಕ ಡಾ. ಆರ್. ಧನರಾಜ್ ಮಾತನಾಡಿ, “ಈ ಚಿತ್ರಗಳು ಐದು ಭಾಷೆಗಳಲ್ಲಿ ಮೂಡಿಬರಲಿದ್ದು, ಉತ್ತಮ ಕಥೆ ಮತ್ತು ಸಂದೇಶವನ್ನು ಹೊಂದಿವೆ. ತುಳುನಾಡಿನ ಸಂಪ್ರದಾಯವನ್ನು ವಿಶ್ವದಾದ್ಯಂತ ಪಸರಿಸುವ ಈ ಪ್ರಯತ್ನಕ್ಕೆ ಎಲ್ಲರ ಸಹಕಾರ ಅಗತ್ಯ,” ಎಂದು ಕೋರಿದರು. ಹಿರಿಯ ರಂಗಕರ್ಮಿ ವಿಜಯಕುಮಾರ್ ಕೊಡಿಯಾಲ್‌ಬೈಲ್ ಚಿತ್ರತಂಡಕ್ಕೆ ಶುಭ ಹಾರೈಸಿದರು.

ಕಾರ್ಯಕ್ರಮದಲ್ಲಿ ಪಮ್ಮಿ ಕೊಡಿಯಾಲ್‌ಬೈಲ್ , ವಕೀಲ ಮೋಹನ್ ದಾಸ್ ರೈ, ಸುಧಾಕರ್ ಮೊಯಿಲಿ, ಹಿರಿಯ ಪತ್ರಕರ್ತ ಜಗನ್ನಾಥ ಶೆಟ್ಟಿ ಬಾಳ, ಧನರಾಜ್‌ ಅವರ ಮಾತೃಶ್ರೀ ಕೆ. ಪುಷ್ಪಾ, ನಾಗೇಶ್ ಶೆಟ್ಟಿ ಮುಂಬೈ, ಅನಿಲ್, ರಾಮಣ್ಣ, ಸಂಜೀವ ಮಾಸ್ಟರ್, ಪುರುಷೋತ್ತಮ್, ರಾಜೇಶ್ ಕೊಚ್ಚಿನ್, ಜೆಪಿ, ಗಂಗಾಧರ ಕಿರೋಡಿಯನ್, ಯುವನಟ ಸಾಜನ್ ಶೆಟ್ಟಿ, ಯುವನಟಿ ಹಿಮಾನಿ,
ನಾಗೇಶ್ ಮತ್ತಿತರರಿದ್ದರು. ಆಂಕರ್‌ ಚೇತನ್‌ ಶೆಟ್ಟಿ ಅವರು ಕಾರ್ಯಕ್ರಮವನ್ನು ನಿರೂಪಿಸಿದರು.

ಬಹುಭಾಷಾ ಕೊರಗ್ಲಾ ತನಿಯಾ ಸಿನಿಮಾಕ್ಕೆ ಡಾ ಆರ್ ಧನರಾಜ್ ಕಥೆ, ಚಿತ್ರಕಥೆ, ಸಂಭಾಷಣೆ ಬರೆದು ನಿರ್ಮಾಣದೊಂದಿಗೆ ನಿರ್ದೇಶನ ಮಾಡಲಿದ್ದಾರೆ. ʻಕನʼ ತುಳು ಸಿನಿಮಾಕ್ಕೆ ವಿಶ್ವನಾಥ್ ಕೋಡಿಕಲ್ ಕಥೆ ಚಿತ್ರಕಥೆ ಸಂಭಾಷಣೆ ಬರೆದು ನಿರ್ದೇಶಿಸಲಿದ್ದಾರೆ. ಅರ್ಚನ ಶೆಟ್ಟಿ ಎರಡೂ ಸಿನಿಮಾಗಳ ಸಹ ನಿರ್ಮಾಪಕಿಯಾಗಿದ್ದಾರೆ.

error: Content is protected !!