ಗೂಡ್ಸ್ ವಾಹನಕ್ಕೆ ಸ್ಕೂಟಿ ಢಿಕ್ಕಿ; ಸವಾರ ಸಾ*ವು

ಉಡುಪಿ: ರಾಂಗ್ ಸೈಡ್‌ನಿಂದ ಬಂದ ಸ್ಕೂಟರ್‌ ಗೂಡ್ಸ್ ವಾಹನಕ್ಕೆ ಢಿಕ್ಕಿ ಹೊಡೆದು, ಸವಾರ ಮೃತಪಟ್ಟ ಘಟನೆ ಉಡುಪಿ-ಮಂಗಳೂರು ರಾಷ್ಟ್ರೀಯ ಹೆದ್ದಾರಿಯ ಎರ್ಮಾಳು ನಾರಾಳ್ತಾಯ ಗುಡಿ ಬಳಿ ಭಾನುವಾರ(ಏ.19) ಸಂಜೆ ನಡೆದಿದೆ.

ಅದಮಾರು ನಿವಾಸಿ ಗುರುರಾಜ ರಾವ್(63) ಮೃತರು.

ಮಂಗಳೂರು ಮೂಲದ ಗೂಡ್ಸ್ ವಾಹನ ಚಾಲಕ ವಿಜಯ್ ಕಾಮತ್ ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡಿದ್ದು, ಅವರನ್ನು ಉಡುಪಿಯ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ವಿಜಯ್ ಅವರ ತಲೆಗೆ ಬಲವಾದ ಪೆಟ್ಟು ಬಿದ್ದಿದ್ದು, ಮೆದುಳಿನ ಭಾಗವು ಹೊರಬಂದಿತ್ತು. ಅಲ್ಲದೆ, ಅವರ ಒಂದು ಕೈ ಸಂಪೂರ್ಣವಾಗಿ ಜಜ್ಜಲ್ಪಟ್ಟಿದ್ದು, ಎರಡು ಮೂರು ತುಂಡುಗಳಾಗಿ ಬೇರ್ಪಟ್ಟಿರುವುದು ನಂತರ ಗಮನಕ್ಕೆ ಬಂದಿದೆ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.

ಢಿಕ್ಕಿಯ ರಭಸಕ್ಕೆ ಗೂಡ್ಸ್ ವಾಹನವು ರಸ್ತೆಯ ಬದಿಯಲ್ಲಿ ಪಲ್ಟಿಯಾಗಿ ಬಿದ್ದಿತ್ತು. ಸ್ಥಳೀಯರು ವಾಹನವನ್ನು ಎತ್ತಿದ ನಂತರ ಚಾಲಕ ಪ್ರಜ್ಞಾಹೀನ ಸ್ಥಿತಿಯಲ್ಲಿ ಒಳಗೆ ಸಿಲುಕಿರುವುದು ಕಂಡುಬಂದಿದೆ. ಇತ್ತ ಸ್ಕೂಟರ್ ಸವಾರ ಗುರುರಾಜ ರಾವ್ ಅವರ ಮೃತದೇಹವು ಸ್ವಲ್ಪ ದೂರಕ್ಕೆ ಎಸೆಯಲ್ಪಟ್ಟಿದೆ.

ಪಡುಬಿದ್ರಿ ಪೊಲೀಸ್ ಉಪನಿರೀಕ್ಷಕ ಅನಿಲ್ ಕುಮಾರ್ ಮತ್ತು ಅವರ ತಂಡ ಸ್ಥಳಕ್ಕೆ ಧಾವಿಸಿ, ಸಾರ್ವಜನಿಕರ ಸಹಾಯದೊಂದಿಗೆ ಗಾಯಾಳುವನ್ನು ಆಸ್ಪತ್ರೆಗೆ ಸಾಗಿಸಲು ವ್ಯವಸ್ಥೆ ಮಾಡಿದರು. ಮೃತರ ದೇಹವನ್ನು ಉಡುಪಿಯ ಅಜ್ಜರಕಾಡು ಸರ್ಕಾರಿ ಆಸ್ಪತ್ರೆಯ ಶವಾಗಾರದಲ್ಲಿ ಇರಿಸಲಾಗಿದೆ.

error: Content is protected !!