“ನಾನು ಸತ್ತ ಮೇಲೆ ಅವಳು ಅನಾಥವಾಗಬಾರದು” ಅಂತ ಹೆಂಡತಿಯನ್ನ ಉಸಿರುಗಟ್ಟಿಸಿ ಕೊಂದ ನಿವೃತ್ತ ISRO ಅಧಿಕಾರಿ

ಬೆಂಗಳೂರು: “ನಾನು ಸತ್ತ ಮೇಲೆ ನನ್ನ ಹೆಂಡತಿಯನ್ನು ನೋಡಿಕೊಳ್ಳುವವರು ಯಾರು? ಅವಳು ಅನಾಥವಾಗಬಾರದು” ಅಂತ ನಿವೃತ್ತ ಇಸ್ರೋ(ISRO) ಅಧಿಕಾರಿಯೊಬ್ಬರು ತಮ್ಮ ಪತ್ನಿಯನ್ನೇ ಉಸಿರುಗಟ್ಟಿಸಿ ಕೊ*ಲೆ ಮಾಡಿರುವ ಘಟನೆ ಬೆಂಗಳೂರಿನ ಆವಲಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

ಸಂಧ್ಯಾ ಮೃತ ಮಹಿಳೆ. ನಾಗೇಶ್ವರ್ ರಾವ್ (65) ಬಂಧಿತ ಆರೋಪಿ.

ನಾಗೇಶ್ವರ್ ರಾವ್ ಇಸ್ರೋದಲ್ಲಿ ಅಧಿಕಾರಿಯಾಗಿ ಸೇವೆ ಸಲ್ಲಿಸಿ ನಿವೃತ್ತರಾಗಿದ್ದರು. ಬೊಮ್ಮನಹಳ್ಳಿ ಸಮೀಪದ ಆವಲಹಳ್ಳಿ ವ್ಯಾಪ್ತಿಯ ‘ವರ್ಚುಸೋ’ ಅಪಾರ್ಟ್ಮೆಂಟ್‌ನಲ್ಲಿ ನಾಗೇಶ್ವರ್ ರಾವ್ ಮತ್ತು ಪತ್ನಿ ಸಂಧ್ಯಾ ವಾಸವಾಗಿದ್ದರು. ಬುಧವಾರ ಬೆಳಗ್ಗೆ ಮನೆಯಲ್ಲಿದ್ದ ಟವೆಲ್‌ನಿಂದ ಪತ್ನಿ ಸಂಧ್ಯಾ ಅವರ ಕುತ್ತಿಗೆ ಬಿಗಿದು ನಾಗೇಶ್ವರ್ ರಾವ್ ಜೀವ ತೆಗೆದಿದ್ದಾನೆ.

ಪೊಲೀಸರ ಪ್ರಾಥಮಿಕ ತನಿಖೆಯಲ್ಲಿ ಆರೋಪಿ ನಾಗೇಶ್ವರ್ ರಾವ್ ಮಾನಸಿಕ ಖಿನ್ನತೆಯಿಂದ ಬಳಲುತ್ತಿರುವುದು ಕಂಡುಬಂದಿದೆ. ನಮಗೆ ವಯಸ್ಸಾಗಿದೆ, ಮಗಳು ಅಮೆರಿಕದಲ್ಲಿದ್ದಾಳೆ. ಇಲ್ಲಿ ನಮ್ಮನ್ನು ನೋಡಿಕೊಳ್ಳಲು ಹತ್ತಿರದ ಸಂಬಂಧಿಗಳೂ ಇಲ್ಲ. ನಾನು ಸತ್ತರೆ ನನ್ನ ಹೆಂಡತಿ ಒಂಟಿಯಾಗುತ್ತಾಳೆ, ಅವಳ ಪಾಡು ಏನಾಗಬಹುದು ಎಂಬ ಚಿಂತೆ ನನ್ನನ್ನು ಕಾಡುತ್ತಿತ್ತು. ಹಾಗಾಗಿ ಅವಳನ್ನು ಕೊಂದು, ನಾನು ಕೂಡ ಆತ್ಮ*ತ್ಯೆ ಮಾಡಿಕೊಳ್ಳಲು ನಿರ್ಧರಿಸಿದ್ದೆ ಎಂದು ಆರೋಪಿ ಹೇಳಿಕೆ ನೀಡಿದ್ದಾನೆ ಎನ್ನಲಾಗಿದೆ. ಆದರೆ, ಪತ್ನಿಯನ್ನು ಕೊಂದ ಬಳಿಕ ಭಯಗೊಂಡ ನಾಗೇಶ್ವರ್ ರಾವ್, ತಾವು ಆತ್ಮ*ತ್ಯೆ ಮಾಡಿಕೊಳ್ಳುವ ಧೈರ್ಯ ಸಾಲದೆ ಸುಮ್ಮನಾಗಿದ್ದಾರೆ.

ದಂಪತಿಗೆ ಒಬ್ಬಳೇ ಮಗಳಿದ್ದು, ಆಕೆ ಅಮೆರಿಕದಲ್ಲಿ ನೆಲೆಸಿದ್ದಾರೆ ಎಂದು ತಿಳಿದುಬಂದಿದೆ. ವಯೋಸಹಜ ಆತಂಕ ಮತ್ತು ಒಂಟಿತನದಿಂದ ಮನನೊಂದಿದ್ದ ಆರೋಪಿ, ಈ ನಿರ್ಧಾರಕ್ಕೆ ಬಂದಂತೆ ಮೇಲ್ನೋಟಕ್ಕೆ ಕಂಡುಬರುತ್ತಿದೆ.

ಘಟನೆ ಬೆಳಕಿಗೆ ಬರುತ್ತಿದ್ದಂತೆಯೇ ಆವಲಹಳ್ಳಿ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ, ಆರೋಪಿಯನ್ನು ಬಂಧಿಸಿದ್ದಾರೆ.

ಮೃತ ಸಂಧ್ಯಾ ಅವರ ದೇಹವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಲಾಗಿದೆ. ಆರೋಪಿಯ ಮಾನಸಿಕ ಸ್ಥಿತಿಗತಿ ಹಾಗೂ ಘಟನೆಯ ಸತ್ಯಾಸತ್ಯತೆ ತಿಳಿಯಲು ಪೊಲೀಸರು ವೈದ್ಯಕೀಯ ದಾಖಲೆಗಳನ್ನು ಪರಿಶೀಲಿಸುತ್ತಿದ್ದಾರೆ.

error: Content is protected !!