ಮಂಗಳೂರು: ಯುವ ಪೀಳಿಗೆಗೆ ಪವಿತ್ರ ಕುರಾನ್ ಪಠಣದ ಮಹತ್ವವನ್ನು ತಲುಪಿಸುವ ಹಾಗೂ ಆಧ್ಯಾತ್ಮಿಕತೆಯತ್ತ ಸೆಳೆಯುವ ಉದ್ದೇಶದಿಂದ ನಗರದಲ್ಲಿ ಆಯೋಜಿಸಲಾಗಿದ್ದ ದಕ್ಷಿಣ ಭಾರತದ ಮೊದಲ ಮುಕ್ತ ರಾಷ್ಟ್ರಮಟ್ಟದ ಕುರಾನ್ ಕಿರಾಅತ್ ಸ್ಪರ್ಧೆಯು ಅತ್ಯಂತ ಯಶಸ್ವಿಯಾಗಿ ಜರುಗಿತು. ಡಾ. ಅಬ್ದುಲ್ ಶಕೀಲ್ ಚಾರಿಟೇಬಲ್ ಟ್ರಸ್ಟ್ನ ದಶಮಾನೋತ್ಸವದ ಅಂಗವಾಗಿ ನಗರದ ಇಂಡಿಯನ್ ಕನ್ವೆನ್ಶನ್ ಹಾಲ್ನಲ್ಲಿ ಈ ಐತಿಹಾಸಿಕ ಸ್ಪರ್ಧೆ ಆಯೋಜಿಸಲಾಗಿತ್ತು.

ಈ ರಾಷ್ಟ್ರಮಟ್ಟದ ಮಹತ್ವದ ಸ್ಪರ್ಧೆಗೆ ದೇಶಾದ್ಯಂತ ಅಭೂತಪೂರ್ವ ಪ್ರತಿಕ್ರಿಯೆ ವ್ಯಕ್ತವಾಗಿತ್ತು. ಕಾಶ್ಮೀರದಿಂದ ಕನ್ಯಾಕುಮಾರಿವರೆಗೆ ಒಟ್ಟು 2,252 ಮಂದಿ ಆನ್ಲೈನ್ ಮೂಲಕ ತಮ್ಮ ಕಿರಾಅತ್ ವೀಡಿಯೊಗಳನ್ನು ಕಳುಹಿಸಿದ್ದರು. ಖ್ಯಾತ ವಿದ್ವಾಂಸರಿಂದ ನಡೆದ ತಾಂತ್ರಿಕ ಪರಿಶೀಲನೆಯ ನಂತರ 50 ಸ್ಪರ್ಧಿಗಳನ್ನು (40 ಹುಡುಗರು ಮತ್ತು 10 ಹುಡುಗಿಯರು) ಅಂತಿಮ ಹಂತಕ್ಕೆ ಆಯ್ಕೆ ಮಾಡಲಾಗಿತ್ತು. ಕರ್ನಾಟಕ, ಕೇರಳ, ಗೋವಾ, ತೆಲಂಗಾಣ ಹಾಗೂ ಉತ್ತರ ಪ್ರದೇಶ ಸೇರಿದಂತೆ ವಿವಿಧ ರಾಜ್ಯಗಳ ಸ್ಪರ್ಧಿಗಳು ಅಂತಿಮ ಹಂತದಲ್ಲಿ ಪೈಪೋಟಿ ನಡೆಸಿದರು.

ಉತ್ತರ ಪ್ರದೇಶದ ಶೈಖ್ ಸರ್ಫರಾಝ್ ಅಝ್ಹರಿ ಮತ್ತು ಹೈದರಾಬಾದ್ನ ಖಾರಿ ಅಹ್ಮದ್ ಮುನೀರ್ ಅವರು ತೀರ್ಪುಗಾರರಾಗಿ ಭಾಗವಹಿಸಿ ಪಾರದರ್ಶಕವಾಗಿ ಮೌಲ್ಯಮಾಪನ ಮಾಡಿದರು.


ಕಾರ್ಯಕ್ರಮದಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಖಾಝಿ ತ್ವಾಕಾ ಅಹ್ಮದ್ ಮುಸ್ಲಿಯಾರ್ ಶುಭಾಶೀರ್ವಚನ ನೀಡಿದರು. ಹಝರತ್ ಮುಹಮ್ಮದ್ ಫಾಝಿಲ್ ರಝ್ವಿ ಕಾವಳ ಕಟ್ಟೆ, ಯು.ಟಿ. ಇಫ್ತಿಕಾರ್, ಮಾಜಿ ಸಚಿವ ರಮಾನಾಥ ರೈ, ಕಾಂಗ್ರೆಸ್ ಮುಖಂಡ ಪದ್ಮರಾಜ್, ಶಾಹುಲ್ ಹಮೀದ್, ಎಸ್.ಎಂ. ರಶೀದ್ ಹಾಜಿ, ನಾಸಿರ್ ಲಕ್ಕಿಸ್ಟಾರ್, ಎಸ್ಡಿಪಿಐಯ ರಿಯಾಝ್ ಫರಂಗಿಪೇಟೆ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು. ಡಾ. ಅಬ್ದುಲ್ ಶಕೀಲ್ ಅವರನ್ನು ಈ ಸಂದರ್ಭದಲ್ಲಿ ಸನ್ಮಾನಿಸಲಾಯಿತು. ಸಲಾಹ್ ಕುತ್ತಾರ್, ಸಮ್ರಾನ್ ಮತ್ತು ಶೈಬಾನ್ ಮಾಡನ್ನೂರು ಕಾರ್ಯಕ್ರಮ ನಿರ್ವಹಿಸಿದರು.

ದೇಶದ ವಿವಿಧ ಭಾಗಗಳಿಂದ ಆಗಮಿಸಿದ್ದ ಪ್ರತಿಭಾನ್ವಿತ ಸ್ಪರ್ಧಿಗಳ ನಡುವಿನ ಕಠಿಣ ಸ್ಪರ್ಧೆಯಲ್ಲಿ ಕೆಳಗಿನವರು ಪ್ರಶಸ್ತಿ ಮುಡಿಗೇರಿಸಿಕೊಂಡರು:
ಪ್ರಥಮ ಸ್ಥಾನ: ಉಮರ್ ಮುಕ್ತಾರ್ ಬಿ.ಎಂ.(ಕಾಸರಗೋಡು, ಕೇರಳ)
ದ್ವಿತೀಯ ಸ್ಥಾನ: ಮುಹಮ್ಮದ್ ರಶಾದ್(ಪಾಲಕ್ಕಾಡ್, ಕೇರಳ)
ತೃತೀಯ ಸ್ಥಾನ: ಮುಹಮ್ಮದ್ ಸಾದ್(ಮೈಸೂರು, ಕರ್ನಾಟಕ)

ಪ್ರಥಮ ಸ್ಥಾನ ವಿಜೇತರಿಗೆ 1,11,111ರೂ., ದ್ವಿತೀಯ ಸ್ಥಾನ ವಿಜೇತರಿಗೆ 55,555 ರೂ., ತೃತೀಯ ಸ್ಥಾನ ವಿಜೇತರಿಗೆ 33,333 ರೂ. ಚೆಕ್ ನೀಡಲಾಯಿತು.
ಡಾ. ಅಬ್ದುಲ್ ಶಕೀಲ್ ಚಾರಿಟೇಬಲ್ ಟ್ರಸ್ಟ್ ಕಳೆದ ಹತ್ತು ವರ್ಷಗಳಿಂದ ಶಿಕ್ಷಣ, ಆರೋಗ್ಯ, ಕುಡಿಯುವ ನೀರು ಹಾಗೂ ಅನಾಥ ಮಕ್ಕಳ ನೆರವಿನಂತಹ ಸಮಾಜಮುಖಿ ಕಾರ್ಯಗಳಲ್ಲಿ ಸಕ್ರಿಯವಾಗಿದೆ. ಈ ಹಿಂದೆ ಮೂರು ಬಾರಿ ವಿದೇಶಗಳಲ್ಲಿ ಕಿರಾಅತ್ ಸ್ಪರ್ಧೆ ಆಯೋಜಿಸಿದ್ದ ಟ್ರಸ್ಟ್, ತನ್ನ 10ನೇ ವಾರ್ಷಿಕೋತ್ಸವದ ಪ್ರಯುಕ್ತ ಮೊದಲ ಬಾರಿಗೆ ಸಂಸ್ಥಾಪಕ ಡಾ. ಅಬ್ದುಲ್ ಶಕೀಲ್ ಅವರ ಹುಟ್ಟೂರಾದ ಮಂಗಳೂರಿನಲ್ಲಿ ಈ ಬೃಹತ್ ಸ್ಪರ್ಧೆಯನ್ನು ಆಯೋಜಿಸಿದೆ.

“ಯುವಜನತೆಯನ್ನು ಮಾದಕ ವ್ಯಸನ ಹಾಗೂ ಅಪರಾಧ ಚಟುವಟಿಕೆಗಳಿಂದ ದೂರವಿಟ್ಟು, ಆಧ್ಯಾತ್ಮಿಕ ಶಿಕ್ಷಣದತ್ತ ಕೊಂಡೊಯ್ಯುವುದು ನಮ್ಮ ಮುಖ್ಯ ಉದ್ದೇಶ. ದಕ್ಷಿಣ ಭಾರತದಲ್ಲಿ ನಡೆದ ಮೊದಲ ದೊಡ್ಡ ಮುಕ್ತ ರಾಷ್ಟ್ರಮಟ್ಟದ ಕಿರಾತ್ ಸ್ಪರ್ಧೆ ಇದಾಗಿದ್ದು, ಇಂತಹ ಇನ್ನಷ್ಟು ಕಾರ್ಯಕ್ರಮಗಳು ನಡೆಯಬೇಕು ಎಂಬುದು ನನ್ನ ಆಶಯ.”- ಡಾ. ಅಬ್ದುಲ್ ಶಕೀಲ್, ಆಯೋಜಕರು