ಶಬರಿಮಲೆ: ಮಂಡಲ ಕಾಲ ತೀರ್ಥಯಾತ್ರೆ ಆರಂಭವಾದ ಬಳಿಕ ಕಳೆದ 28 ದಿನಗಳಲ್ಲಿ 25 ಲಕ್ಷಕ್ಕೂ ಹೆಚ್ಚು ಭಕ್ತರು ಶಬರಿಮಲೆಗೆ ಭೇಟಿ ನೀಡಿದ್ದಾರೆ.

ಪಂಪಾದಿಂದ ಸನ್ನಿಧಾನ ತನಕ ಎಲ್ಲೂ ಕಾಯದೆ ಭಕ್ತರು ನೇರವಾಗಿ ದರ್ಶನ ಪಡೆದಿದ್ದಾರೆ. ಸಾಂಪ್ರದಾಯಿಕ ಅರಣ್ಯ ಮಾರ್ಗದ ಮೂಲಕ 1 ಲಕ್ಷಕ್ಕೂ ಹೆಚ್ಚು ಭಕ್ತರು ಸನ್ನಿಧಾನಕ್ಕೆ ಆಗಮಿಸಿದ್ದಾರೆ. ಶಬರಿಮಲೆಯ ಸನ್ನಿಧಾನ, ಪಂಪಾ, ನಿಲಕ್ಕಲ್ ಪ್ರದೇಶಗಳಲ್ಲಿ ಶನಿವಾರ ಭಾರಿ ಮಳೆಯಾಗಿದೆ. ಮಲೆ ಏರುವ ಮೊದಲು ಭಕ್ತರು ಮುನ್ನೆಚ್ಚರಿಕೆ ವಹಿಸುವಂತೆ ಜಿಲ್ಲಾಧಿಕಾರಿ ಎಸ್.ಪ್ರೇಮ್ ಕೃಷ್ಣನ್ ತಿಳಿಸಿದ್ದಾರೆ.
ಶಬರಿಮಲೆಯಲ್ಲಿ ಭಕ್ತರ ಸಂಖ್ಯೆ ಹೆಚ್ಚುತ್ತಿದ್ದು, ದೈನಂದಿನ ಅರವಣ ಪಾಯಸದ ಮಾರಾಟ 4 ಲಕ್ಷ ಟಿನ್ ದಾಟಿದ್ದು, ಒಬ್ಬರಿಗೆ ಗರಿಷ್ಠ 20 ಟಿನ್ ಅರವಣ ನೀಡಲಾಗುತ್ತಿದೆ. ಮಂಡಲ ಕಾಲ ತೀರ್ಥಯಾತ್ರೆಗೆ ದೇಗುಲ ತೆರೆದಾಗ, 46 ಲಕ್ಷ ಟಿನ್ ಅರವಣ ದಾಸ್ತಾನಿದ್ದು, ಪ್ರಸ್ತುತ ಸುಮಾರು 25 ಲಕ್ಷ ಟಿನ್ ಬಾಕಿ ಉಳಿದಿದೆ.
ಅಗತ್ಯ ದಾಸ್ತಾನು ಖಚಿತಪಡಿಸಿಕೊಳ್ಳಲು ದೈನಂದಿನ ಕನಿಷ್ಠ 3 ಲಕ್ಷ ಟಿನ್ ಉತ್ಪಾದಿಸಬೇಕು. ಪ್ರಸ್ತುತ, ಎರಡೂವರೆ ಲಕ್ಷ ಟಿನ್ ಉತ್ಪಾದಿಸಲಾಗುತ್ತಿದೆ. ಹಿಂದಿನ ವರ್ಷಗಳಿಗೆ ಹೋಲಿಸಿದರೆ ಈ ವರ್ಷ ಅರವಣ ಮಾರಾಟದಲ್ಲಿ ಭಾರಿ ಏರಿಕೆಯಾಗಿದೆ. ದಾಸ್ತಾನು ಹೆಚ್ಚು ಕಡಿಮೆಯಾದರೂ ಕೊರತೆ ಉಂಟಾಗದು. ಅರವಣ ಮಾರಾಟದ ಮೇಲೆ ನಿರ್ಬಂಧ ವಿಧಿಸುವ ಸಾಧ್ಯತೆಯಿಲ್ಲ. ದೈನಂದಿನ ನಿಗದಿತ ಸಂಖ್ಯೆಯ ಉತ್ಪಾದನೆಯಾಗುತ್ತಿದೆ. ದಟ್ಟಣೆ ಕಡಿಮೆ ಇರುವ ದಿನಗಳಲ್ಲಿ ದಾಸ್ತಾನು ಹೆಚ್ಚುತ್ತದೆ ಎಂದು ದೇವಸ್ವಂ ಮಂಡಳಿ ಹೇಳಿದೆ.
ಸನ್ನಿಧಾನದ ಅಗ್ಮಿಕುಂಡದ ಬಳಿ 10 ಕೌಂಟರ್ಗಳು ಮತ್ತು ದೇಗುಲದ ಹೊರಗೆ 8 ಕೌಂಟರ್ಗಳ ಮೂಲಕ ಅರವಣ ಮತ್ತು ಅಪ್ಪ ಮಾರಾಟ ಮಾಡಲಾಗುತ್ತಿದೆ.