ಬೆಂಗಳೂರು: ಸರ್ಕಾರಿ ಜಾಗದಲ್ಲಿ ಆರ್ಎಸ್ಎಸ್ ಚಟುವಟಿಕೆಗಳ ನಿಯಂತ್ರಣ ಕುರಿತಂತೆ ಚರ್ಚೆಗೆ ಗ್ರಾಸವಾಗಿದ್ದ ವಿಚಾರದಲ್ಲಿ ಸರ್ಕಾರ ಈಗ ತನ್ನ ನಿಲುವು ಬದಲಿಸಿದೆ. ಹೊಸ ಮಸೂದೆ ಮಂಡನೆ ಮಾಡುವ ಯೋಚನೆಯಿಂದ ಸಿಎಂ ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಹಿಂದೆ ಸರಿದಿದೆ ಎನ್ನಲಾಗುತ್ತಿದೆ.
ಐಟಿ–ಬಿಟಿ ಸಚಿವ ಪ್ರಿಯಾಂಕ್ ಖರ್ಗೆಯ ಪತ್ರದ ಹಿನ್ನೆಲೆ, ಕಳೆದ ವಾರ ನಡೆದ ಕ್ಯಾಬಿನೆಟ್ ಸಭೆಯಲ್ಲಿ ಈ ವಿಷಯ ಚರ್ಚೆಗೆ ಬಂದಿತ್ತು. ಸಭೆಯಲ್ಲಿ “ಸರ್ಕಾರಿ ಆದೇಶ ಹೊರಡಿಸಿದರೆ ಸಾಕು, ಹೊಸ ಬಿಲ್ ಅಗತ್ಯವಿಲ್ಲ. ಈಗ ಈ ವಿಚಾರವನ್ನು ಮುಂದಕ್ಕೆ ಎಳೆಯುವುದು ಆರ್ಎಸ್ಎಸ್ಗೆ ಪ್ರಚಾರ ನೀಡಿದಂತೆ ಆಗುತ್ತದೆ” ಎಂದು ಸಿಎಂ, ಡಿಸಿಎಂ ಸೇರಿದಂತೆ ಹಿರಿಯ ಸಚಿವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ ಎನ್ನಲಾಗಿದೆ.
‘ರೆಗ್ಯುಲೇಶನ್ ಆಫ್ ಯೂಸ್ ಆಫ್ ಗವರ್ನಮೆಂಟ್ ಪ್ರಿಮಿಸಿಸ್ ಅಂಡ್ ಪ್ರಾಪರ್ಟೀಸ್ ಬಿಲ್–2025’ ಕರಡು ಸಿದ್ಧವಾಗಿದ್ದರೂ, ಅದನ್ನು ಮಂಡನೆ ಮಾಡುವ ಯೋಜನೆಗೆ ಸರ್ಕಾರ ತಾತ್ಕಾಲಿಕ ವಿರಾಮ ನೀಡಿದೆ.
ಡಿಸಿಎಂ ಡಿ.ಕೆ. ಶಿವಕುಮಾರ್, “ನಮ್ಮ ರಾಜಕೀಯ ಭಿನ್ನಾಭಿಪ್ರಾಯಗಳು ಬೇರೆ, ಸಿದ್ಧಾಂತದ ವಿಚಾರ ಬೇರೆ. ಬಿಲ್ ಮಂಡನೆ ಮಾಡುವ ಅಗತ್ಯ ಈಗಿಲ್ಲ” ಎಂದು ಅಭಿಪ್ರಾಯಿಸಿದ್ದಾರೆ ಎನ್ನಲಾಗುತ್ತಿದೆ.
ಸರ್ಕಾರ ಇದೀಗ ಹೊಸ ಮಸೂದೆಯ ಬದಲು, ಗೊಂದಲ ಅಥವಾ ವಿವಾದ ಉಂಟಾದ ಪ್ರದೇಶಗಳಲ್ಲಿ ಮಾತ್ರ ಕಠಿಣ ನಿಯಮ ಜಾರಿಗೊಳಿಸಿ, ಉಳಿದಡೆ ಸ್ಥಳೀಯ ಪರಿಸ್ಥಿತಿಯ ಆಧಾರದಲ್ಲಿ ಅನುಮತಿ ನೀಡುವ ನೀತಿಯನ್ನು ಅನುಸರಿಸಲಿದೆ.
ಮೂಲ ಕರಡು ಪ್ರಕಾರ — ಯಾವುದೇ ಧಾರ್ಮಿಕ ಅಥವಾ ರಾಜಕೀಯ ಕಾರ್ಯಕ್ರಮಕ್ಕೆ ಜಿಲ್ಲಾಧಿಕಾರಿ ಅಥವಾ ವರಿಷ್ಠಾಧಿಕಾರಿಗಳಿಂದ ಕಡ್ಡಾಯ ಅನುಮತಿ ಪಡೆಯಬೇಕಿತ್ತು. ನಿಯಮ ಉಲ್ಲಂಘನೆ ಮಾಡಿದರೆ 2 ವರ್ಷ ಜೈಲು ಅಥವಾ ₹50,000 ದಂಡ ವಿಧಿಸುವ ಅವಕಾಶವಿತ್ತು. ಎರಡನೇ ಬಾರಿ ಉಲ್ಲಂಘನೆ ಮಾಡಿದರೆ 3 ವರ್ಷ ಜೈಲು ಮತ್ತು ₹1 ಲಕ್ಷ ದಂಡ ವಿಧಿಸುವ ನಿಯಮ ತರಲಾಗಿತ್ತು. ಈ ನಿಯಮವನ್ನೂ ಮೀರಿದರೆ ಪ್ರತಿದಿನ ₹5,000 ದಂಡ ವಿಧಿಸುವ ನಿಯಮ ಪ್ರಸ್ತಾಪವಾಗಿತ್ತು.
ಈ ನಿಯಮಗಳು ವಿವಾದಕ್ಕೆ ಕಾರಣವಾಗಬಹುದು ಎಂಬ ಅಂದಾಜಿನಿಂದ ಸರ್ಕಾರ ಮಸೂದೆ ಜಾರಿಗೆ ಇದೀಗ ಹಿಂದೇಟು ಹಾಕಿದೆ. ಅಂತಿಮವಾಗಿ ಸರ್ಕಾರದಿಂದ ಬಿಲ್ ತಾತ್ಕಾಲಿಕವಾಗಿ ಸ್ಥಗಿತಗೊಂಡಿದ್ದಲ್ಲದೆ ಸೌಹಾರ್ದ ವಾತಾವರಣ ಕದಡುವ ಈ ಕ್ರಮವನ್ನು ಕೈಬಿಡಲು ಸರ್ಕಾರ ನಿರ್ಧಾರ ಕೈಗೊಂಡಿದೆ.