ಸಕಲೇಶಪುರ: ಕಳೆದ ಮೂರು ದಿನಗಳಿಂದ ಎಡೆಬಿಡದೆ ಸುರಿಯುತ್ತಿರುವ ಮಳೆಯಿಂದಾಗಿ ಶಿರಾಡಿ ಘಾಟ್ನ ರಾಷ್ಟ್ರೀಯ ಹೆದ್ದಾರಿ 75ರಲ್ಲಿ ವಾಹನ ಸಂಚಾರ ಆತಂಕಕ್ಕೆ ಕಾರಣವಾಗಿದೆ. ಹೆದ್ದಾರಿ ಪಕ್ಕದ ಮರಗಳು ರಸ್ತೆಗೆ ಉರುಳಿ ಬೀಳುತ್ತಿರುವ ಕಾರಣ ಕೆಲವು ದಿನಗಳವರೆಗೆ ತೀರಾ ಅಗತ್ಯವಿದ್ದರೆ ಮಾತ್ರ ಈ ರಸ್ತೆಯಲ್ಲಿ ಗುಂಡಿಗೆ ಗಟ್ಟಿ ಮಾಡ್ಕೊಂಡು ಸಂಚರಿಸಿ. ಅಲ್ಲಲ್ಲಿ ಭೂಕುಸಿತದ ವರದಿಯಾಗುತ್ತಿದ್ದು ಹೆದ್ದಾರಿ ಸಂಚಾರಕ್ಕೆ ಸಂಚಕಾರ ಎದುರಾಗಿದೆ.
ಶಿರಾಡಿ ಘಾಟ್ನ ಸಕಲೇಶಪುರದಿಂದ ಮಾರನಹಳ್ಳಿವರೆಗಿನ ರಸ್ತೆ ಕಾಮಗಾರಿಯೂ ಭಾಗಶ: ನಡೆದಿರುವ ಕಾರಣ ವಾಹನ ಸಂಚಾರ ಕಷ್ಟಕರವಾಗಿದೆ. ಒಂದೊಮ್ಮೆ ರಸ್ತೆ ಬಂದ್ ಆದರೆ ಆತಂಕದಲ್ಲೇ ಗಂಟೆಗಟ್ಟಲೆ ಕಾಯಬೇಕಾಗಿದೆ. ಭೂ ಕುಸಿತದ ಸಂಭಾವ್ಯ ಸ್ಥಳಗಳಲ್ಲಿ ಎಚ್ಚರಿಕೆ ಫಲಕಗಳನ್ನು ಅಳವಡಿಸಿದ್ದರೂ, ಭಾರೀ ಮಳೆಯಿಂದ ಯಾವಾಗ ಏನಾಗುತ್ತದೆ ಎಂಬ ಆತಂಕ ಪ್ರಯಾಣಿಕರನ್ನು ಕಾಡುತ್ತಿದೆ. ಕಳೆದ ಮೇ ತಿಂಗಳಿನಲ್ಲಿ ಕೇವಲ ಒಂದು ಮಳೆಯಿಂದ ದೊಡ್ಡ ಅನಾಹುತಗಳ ಸರಣಿಯೇ ಸೃಷ್ಟಿಯಾಗಿತ್ತು.
ಹಾಸನದಿಂದ ಸಕಲೇಶಪುರದವರೆಗಿನ ರಾಷ್ಟ್ರೀಯ ಹೆದ್ದಾರಿ 75ರ 45 ಕಿ.ಮೀ ಚತುಷ್ಪಥ ರಸ್ತೆ ನಿರ್ಮಾಣ ಕಾಮಗಾರಿ ಬಾಕಿಯುಳಿದಿದೆ. ಸಕಲೇಶಪುರದಿಂದ ಮಾರನಹಳ್ಳಿವರೆಗಿನ 12 ಕಿ.ಮೀ ರಸ್ತೆಯ ಕಾಮಗಾರಿಯು ಕಳೆದ 8 ವರ್ಷಗಳಿಂದ ನಡೆಯುತ್ತಿದ್ದು ಇನ್ನೂ ಪೂರ್ತಿಗೊಳ್ಳದೇ ಇರುವುದು ಸಮಸ್ಯೆಗೆ ಕಾರಣವಾಗಿದೆ.