ಕೊಲೆ ಮಾಡಿ ಅಡಗಿದ್ದ ರೌಡಿಗಳ ಕಾಲಿಗೆ ಗುಂಡಿಕ್ಕಿದ ಪೊಲೀಸರು!

ಬೆಂಗಳೂರು: ಕೊಲೆ ಪ್ರಕರಣದಲ್ಲಿ ಭಾಗಿಯಾಗಿ ಪೊಲೀಸರ ಕೈಗೆ ಸಿಗದೆ ಅರಣ್ಯ ಪ್ರದೇಶದಲ್ಲಿ ಅಡಗಿದ್ದ ಖತರ್ನಾಕ್‌ ಕ್ರಿಮಿನಲ್‌ ಗಳಿಗೆ ಜೆ.ಜೆ.ನಗರ ಠಾಣೆ ಪೊಲೀಸರು ಗುಂಡೇಟು ಕೊಟ್ಟು ಬಂಧಿಸಿದ ಘಟನೆ ನಡೆದಿದೆ. ಕಲಾಸಿಪಾಳ್ಯದ ಅರುಣ್‌ (27) ಮತ್ತು ಜನತಾ ಕಾಲೋನಿಯ ದೀಪು (28) ಎಂಬಾತ ಗಾಯಗೊಂಡಿದ್ದು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಸಹಚರರಾದ ಅಪ್ಪಯ್ಯ (26) ಮತ್ತು ಸಂತು(27) ಎಂಬಾತನನ್ನು ಬಂಧಿಸಲಾಗಿದೆ. ಆರೋಪಿಗಳು ಶನಿವಾರ ರಾತ್ರಿ ಜನತಾ ಕಾಲೊನಿಯಲ್ಲಿ ನಡೆದಿದ್ದ ವಿಜಯ್ (26) ಎಂಬ ರೌಡಿಶೀಟರ್‌ ಕೊಲೆಯಲ್ಲಿ ಭಾಗಿಯಾಗಿದ್ದರು.
ಆರೋಪಿಗಳ ಅರುಣ್‌ ಮತ್ತು ದೀಪು ರಾಜರಾಜೇಶ್ವರಿನಗರ ಸಮೀಪದ ಅರಣ್ಯ ಪ್ರದೇಶದಲ್ಲಿ ತಲೆಮರೆಸಿಕೊಂಡಿದ್ದ ಮಾಹಿತಿ ಪಡೆದ ಜೆ.ಜೆ.ನಗರ ಠಾಣಾ ಸಬ್‌ ಇನ್ ಸ್ಪೆಕ್ಟರ್ ಪಿಐ ಕೆಂಪೇಗೌಡ ಮತ್ತು ತಂಡ ಆರೋಪಿಗಳ ಬಂಧಿಸಲು ತೆರಳಿತ್ತು. ಈ ವೇಳೆ ಪೊಲೀಸರ ಮೇಲೆ ಮಾರಕಾಸ್ತ್ರಗಳಿಂದ ದಾಳಿ ನಡೆಸಿ ತಪ್ಪಿಸಿಕೊಳ್ಳಲು ಯತ್ನಿಸಿದ್ದಾರೆ. ಈ ವೇಳೆ ಕೆಂಪೇಗೌಡ ಮತ್ತು ಪಿಎಸ್‌ಐ ಪದ್ಮನಾಭ ಆತ್ಮರಕ್ಷಣೆಗಾಗಿ ಆರೋಪಿಗಳ ಕಾಲಿಗೆ ಗುಂಡು ಹಾರಿಸಿದ್ದಾರೆ. ಅರುಣ್‌ನ ಎಡಗಾಲಿಗೆ ಮತ್ತು ದೀಪುನ ಬಲಗಾಲಿಗೆ ಗುಂಡೇಟು ಬಿದ್ದಿದೆ. ನಂತರ ಪೊಲೀಸರು ಅವರನ್ನು ಬಂಧಿಸಿ ಆಸ್ಪತ್ರೆಗೆ ದಾಖಲು ಮಾಡಿದ್ದಾರೆ.
ತಮಿಳುನಾಡು ಮೂಲದ ವಿಜಯ್‌, ಸಿಟಿ ಮಾರುಕಟ್ಟೆಯಲ್ಲಿ ಚಪ್ಪಲಿ ವ್ಯಾಪಾರ ಮಾಡಿ ಕೊಂಡಿದ್ದ. ಈತನ ಮೇಲೆ ಹಲವು ಪ್ರಕರಣಗಳು ದಾಖಲಾಗಿತ್ತು. ಈತನ ವಿರುದ್ಧ ಕಾಟನ್‌ಪೇಟೆ, ಜೆ.ಜೆ.ನಗರ ಠಾಣೆಯಲ್ಲಿ ರೌಡಿಪಟ್ಟಿ ತೆರೆಯಲಾಗಿದೆ. ಮೂರು ತಿಂಗಳ ಹಿಂದೆ ಕಲಾಸಿಪಾಳ್ಯದಲ್ಲಿ ಆರೋಪಿ ಅರುಣ್‌ ಮೇಲೆ ವಿಜಯ್‌ ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿದ್ದ. ಇದೇ ಪ್ರಕರಣದಲ್ಲಿ ಪರಪ್ಪನ ಅಗ್ರಹಾರ ಜೈಲು ಸೇರಿದ್ದ ವಿಜಯ್‌, ಮೂರು ದಿನಗಳ ಹಿಂದಷ್ಟೇ ಬಿಡುಗಡೆಯಾಗಿದ್ದ. ಈ ವಿಚಾರ ತಿಳಿದ ಅರುಣ್‌ ಮತ್ತು ಸಹಚರರು ಶನಿವಾರ ರಾತ್ರಿ ಜನತಾ ಕಾಲೋನಿಗೆ ಹೋಗಿ ವಿಜಯ್‌ ನನ್ನು ಭೀಕರವಾಗಿ ಕೊಲೆಗೈದು ಪರಾರಿಯಾಗಿದ್ದರು.

error: Content is protected !!