ಮಂಗಳೂರು: ಹಲವು ವರ್ಷಗಳಿಂದ ನೆನೆಗುದಿಗೆ ಬಿದ್ದಿರುವ ಪರಿಶಿಷ್ಟರ ಮೀಸಲು ಭೂಮಿಯಾಗಿರುವ ಡಿ. ಸಿ ಮನ್ನಾ ಭೂಮಿಯ ಮಂಜೂರಾತಿಗೆ ಸಂಬಂಧಿಸಿದ ನ್ಯೂನತೆಗಳನ್ನು ಸರಿಪಡಿಸುವ ಬಗ್ಗೆ ದಿನಾಂಕ: 10-6-2025 ರಂದು ಜಿಲ್ಲಾಧಿಕಾರಿ ಕಚೇರಿಯಲ್ಲಿ ಕರ್ನಾಟಕ ವಿಧಾನ ಪರಿಷತ್ ಶಾಸಕರಾದ ಶ್ರೀ ಐವನ್ ಡಿಸೋಜಾರವರು ದ.ಕ. ಜಿಲ್ಲಾ ಕಾಂಗ್ರೆಸ್ ಪರಿಶಿಷ್ಟ ಜಾತಿ ವಿಭಾಗದ ನಾಯಕರು ಮತ್ತು ದಲಿತ ಸಂಘಟನೆಗಳ ಮುಖಂಡರ ಜೊತೆ ಸುಧೀರ್ಘ ಚರ್ಚೆಯನ್ನು ನಡೆಸಿದರು.
ಬ್ರಿಟೀಷರು ಭಾರತಕ್ಕೆ ಬಂದಾಗ ಇಲ್ಲಿನ ಪರಿಶಿಷ್ಟರ ಸ್ಥಿತಿಗತಿಯನ್ನು ಆಧ್ಯಯನ ಮಾಡಿ 100 ವರ್ಷದ ಹಿಂದೆಯೇ ಭೂಮಿಯನ್ನು ಪರಿಶಿಷ್ಟರಿಗಾಗಿ ಮೀಸಲಿಟ್ಟಿದ್ದರು, ಪರಿಶಿಷ್ಟರು ಅನುಭವಿಸುತ್ತಿದ್ದ ಸಾಮಾಜಿಕ ಶೈಕ್ಷಣಿಕ ಸಮಸ್ಯೆಗಳನ್ನು ಮುಂದಿಟ್ಟುಕೊಂಡು ಬ್ರಿಟೀಷ್ ಆಡಳಿತವು ಸಾಮಾಜಿಕ ನ್ಯಾಯವನ್ನು ಕಲ್ಪಿಸಿ ಕೊಟ್ಟಿದೆ ಅದರ ಫಲಶೃತಿಯೇ ಜಿಲ್ಲೆಯಾದ್ಯಂತ ಮೀಸಲಿಟ್ಟಿರುವ ಡಿ.ಸಿ ಮನ್ನಾ ಭೂಮಿಯಾಗಿದೆ. ಸ್ವತಂತ್ರ ಪೂರ್ವದಲ್ಲೂ ಅನಂತರದಲ್ಲೂ ಸದ್ರಿ ಜಮೀನು ಪರಿಶಿಷ್ಟರಿಗೆ ಮಂಜೂರಾತಿ ಆಗಿರುತ್ತದೆ. ಉಳಿಕೆ ಜಮೀನು ಮಂಜೂರಾತಿಗಾಗಿ ಕಳೆದ 8 ವರ್ಷಗಳಿಂದ ನಿರಂತರ ಹೋರಾಟ ಸಾಗಿಕೊಂಡು ಬಂದಿದೆ ಎಂದು ದಲಿತ ಮುಖಂಡರು ಅಭಿಪ್ರಾಯ ಪಟ್ಟರು.
ಡಿ. ಸಿ ಮನ್ನಾ ಭೂಮಿಯ ಮಂಜೂರಾತಿಗೆ ಸಂಬಂಧಿಸಿದಂತೆ ಇರುವ ತೊಡಕುಳಗಳನ್ನು ಸರಿಪಡಿಸಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಅರ್ಹ ಫಲಾನುಭವಿಗಳಿಗೆ ವಿತರಿಸಲು ಕಾಂಗ್ರೆಸ್ ಪಕ್ಷವು ತನ್ನ ಪ್ರಣಾಳಿಕೆಯಲ್ಲಿ ತಿಳಿಸಿದೆ. ಸರಕಾರದ ಮಟ್ಟದಲ್ಲಿ ಕಾನೂನಿಗೆ ತಿದ್ದುಪಡಿ ತರುವ ಮೂಲಕ ಕೊಟ್ಟ ಮಾತನ್ನು ಈಡೇರಿಸುತ್ತೇವೆ, ಇದನ್ನು ತನ್ನ ವೈಯಕ್ತಿಕ ನೆಲೆಯಲ್ಲಿ ಆದ್ಯತೆ ಕೊಟ್ಟು ನಡೆಸಿಕೊಡುತ್ತೇನೆ ಎಂದು ಎಂ.ಎಲ್.ಸಿ. ಶ್ರೀ ಐವನ್ ಡಿಸೋಜ ರವರು ಭರವಸೆಯನ್ನು ನೀಡಿದರು.
ಈ ಸಭೆಯಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಜಿಲ್ಲಾಧಿಕಾರಿ ಮಲ್ಲೈ ಮುಹಿಲನ್, ಜಿಲ್ಲಾ ಕಾಂಗ್ರೆಸ್ ಪರಿಶಿಷ್ಟ ಜಾತಿ ವಿಭಾಗದ ಅಧ್ಯಕ್ಷರಾದ ದಿನೇಶ್ ಮೂಳೂರು, ಉಪಾಧ್ಯಕ್ಷರಾದ ಪ್ರೇಮ್ ಬಲ್ಲಾಳ್ ಭಾಗ್,ಶೇಖರ್ ಕುಕ್ಕೇಡಿ, , ರವಿ ಸುಂಕದಕಟ್ಟೆ, ಗಣೇಶ್ ಪ್ರಸಾದ್, ಬಾಬು ಅಳಿಯೂರು ದಲಿತ ಮುಖಂಡರುಗಳಾದ ಎಂ. ದೇವದಾಸ್, ರಮೇಶ್ ಕೋಟ್ಯಾನ್, ಅಶೋಕ್ ಕೊಂಚಾಡಿ, ಎಸ್. ಪಿ ಆನಂದ್, ಸರೋಜಿನಿ ಬಂಟ್ವಾಳ, ಸುಧಾಕರ್ ಬೋಳೂರು, ಕಮಲಾಕ್ಷ ಬಜಾಲ್, ಸೇಸಪ್ಪ ಬೆದ್ರಕಾಡ್, ರಾಮಚಂದ್ರ, ಸದಾಶಿವ ಸಾಲ್ಯಾನ್, ಶಿವಾನಂದ್ ಬಲ್ಲಾಳ್ ಭಾಗ್, ಅನಿಲ್ ಕುಮಾರ್ ಕಂಕನಾಡಿ ಮೊದಲಾದವರು ಉಪಸ್ಥಿತರಿದ್ದರು.