ಹೊಸತನದ “ಎಕ್ಸ್ ಆಂಡ್ ವೈ“ ಜೂ.26ಕ್ಕೆ ರಿಲೀಸ್ !

ಹುಟ್ಟಿಯೇ ಇಲ್ಲದ ಆತ್ಮದ ಕಥೆಯನ್ನು ಹೇಳಲಿರುವ ಅತಿ ಅಪರೂಪದ ಸಿನಿಮಾ

ಸತ್ಯಪ್ರಕಾಶ್‌ ಎಂದರೆ ಹೊಸತನ, ಪ್ರತಿಭೆ, ನಿರೀಕ್ಷೆ. ಅವರೊಬ್ಬ ಅನುಭವಿ ನಿರ್ದೇಶಕ, ನಟ. ಇಂಥ ಪ್ರತಿಭಾನ್ವಿತರಿಗೆ ಅನುಭವಿ ನಿರ್ಮಾಪಕರೂ ಸಿಕ್ಕಿದಾಗ ಹೊರ ಬರುವ ಸಿನಿಮಾದ ಬಗ್ಗೆ ಭಾರೀ ನಿರೀಕ್ಷೆ ಇರುತ್ತದೆ. ಸಾಲದ್ದಕ್ಕೆ ಸತ್ಯಪ್ರಕಾಶ್‌ ತನ್ನ ಮೊದಲ ಸಿನಿಮಾಕ್ಕೇ ರಾಜ್ಯಪ್ರಶಸ್ತಿ ಹಾಗೂ ಎರಡನೇ ಸಿನಿಮಾಕ್ಕೆ ರಾಜ್ಯ ಮತ್ತು ರಾಷ್ಟ್ರಪ್ರಶಸ್ತಿಯನ್ನೂ ಪಡೆದುಕೊಂಡಿರುವ ಹಿರಿಮೆ ಹೊಂದಿರುವವರು. ಅಂಥವರ ನಟನೆ ಹಾಗೂ ನಿರ್ದೇಶನದಲ್ಲಿ ಹೊರಬರುತ್ತಿರುವ ಎಕ್ಸ್ ಆ್ಯಂಡ್‌ ವೈ ಜೂನ್ 26 ರಂದು ರಾಜ್ಯಾದ್ಯಂತ ಬಿಡುಗಡೆಯಾಗಲಿದೆ.


ಈ ಸಿನಿಮಾ ಫ್ಯಾಂಟಸಿ ಮತ್ತು ಸೋಶಿಯಲ್‌ ಡ್ರಾಮಾ ಕಥೆಯನ್ನು ಹೊಂದಿದ್ದು, ಈ ವರೆಗೆ ಯಾರೂ ನೀಡದಂಥ ಹುಟ್ಟಿಯೇ ಇಲ್ಲದ ಆತ್ಮದ ಕಥೆಯನ್ನು ಬಹುಸುಂದರವಾಗಿ, ಹಾಸ್ಯಮಿಶ್ರಿತವಾಗಿ ಹೆಣೆದು ಪ್ರೇಕ್ಷಕರಿಗೆ ಕೊಡಲು ಮುಂದಾಗಿದ್ದಾರೆ. ಇದರಲ್ಲಿ ಒಂದಷ್ಟು ಪೋಲಿತನ, ಆ್ಯಕ್ಷನ್‌ ಕೂಡ ಇರಲಿದೆ. 5 ವರ್ಷದ ಮಗುವಿನಿಂದ ಹಿಡಿದು 95 ವರ್ಷದ ವೃದ್ಧರ ವರೆಗೆ ಎಲ್ಲರಿಗೂ ಬೇಕಾಗುವಂಥ ಹಾಸ್ಯ, ಸಂದೇಶ, ಕಥೆಯನ್ನು ಎಕ್ಸ್ ಆ್ಯಂಡ್‌ ವೈ ಹೊಂದಿದೆ ಎಂದು ಸತ್ಯಪ್ರಕಾಶ್‌ ಹೇಳಿದ್ದಾರೆ. ರಾಮಾ ರಾಮಾ ರೇ ಸಿನಿಮಾದ ಮೂಲಕ ಚಿತ್ರರಂಗಕ್ಕೆ ಪ್ರವೇಶಿಸಿದ ಸತ್ಯಪ್ರಕಾಶ್‌ ಅವರು ತನ್ನ ಈ ಚೊಚ್ಚಲ ಚಿತ್ರಕ್ಕೇ ರಾಜ್ಯಪ್ರಶಸ್ತಿಯನ್ನು ಪಡೆದು ಚಿತ್ರೋದ್ಯಮದ ಗಮನ ಸೆಳೆದವರು. ಬಳಿಕ ಅವರು ಮಾಡಿರುವ ಒಂದಲ್ಲಾ ಎರಡಲ್ಲಾ ಸಿನಿಮಾಕ್ಕೂ ರಾಜ್ಯ ಮತ್ತು ರಾಷ್ಟ್ರ ಪ್ರಶಸ್ತಿ ಸಿಕ್ಕಿರುವುದು ಇವರ ಪ್ರತಿಭೆಗೆ ಸಾಕ್ಷಿ ನುಡಿಯುತ್ತಿದೆ. ಅದಾಗಿ ಮೂರು ವರ್ಷಗಳ ಬಳಿಕ ಭಾರೀ ಸಿದ್ಧತೆಯೊಂದಿಗೆ ಸಿದ್ಧಪಡಿಸಿರುವ ಸಿನಿಮಾವೇ ಎಕ್ಸ್ ಆ್ಯಂಡ್‌ ವೈ.

ಬೆಂಗಳೂರು ಮತ್ತು ಮಂಗಳೂರಿನ ವಿವಿಧೆಡೆ ಸುಮಾರು 50 ದಿನಗಳ ಕಾಲ ಚಿತ್ರೀಕರಣ ನಡೆಸಲಾಗಿದ್ದು, ಪ್ರಮುಖ ಪಾತ್ರಗಳಲ್ಲಿ ಸತ್ಯಪ್ರಕಾಶ್‌, ಮ್ಯಾನ್‌ ಆಫ್‌ ದ ಮ್ಯಾಚ್‌ ಸಿನಿಮಾ ಖ್ಯಾತಿಯ ಅಥರ್ವ ಪ್ರಕಾಶ್‌, ದೂರದರ್ಶನ ಸಿನಿಮಾ ಖ್ಯಾತಿಯ ಅಯನಾ ಮತ್ತು ಬೃಂದಾ ಆಚಾರ್ಯ ಮುಂತಾದವರು ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಉಳಿದಂತೆ ದೊಡ್ಡಣ್ಣ, ಸುಂದರ್‌, ವೀಣಾ ಸುಂದರ್‌, ಇದರಲ್ಲಿ ರಾಜೇಶ್‌ ಕೃಷ್ಣನ್‌, ಹೇಮಂತ್‌ ಮುಂತಾದ ಪ್ರಖ್ಯಾತ ಗಾಯಕರು ಹಾಡಿರುವ 6 ಹಾಡುಗಳಿವೆ. ಲವಿತ್‌ ಛಾಯಾಗ್ರಹಣ, ಕೌಶಿಕ್‌ ಹರ್ಷ ಅವರ ಸಂಗೀತ, ಬಿ.ಎಸ್‌. ಕೆಂಪರಾಜು ಅವರ ಸಂಕಲನದಲ್ಲಿ ಮೂಡಿಬಂದಿರುವ ಈ ಸಿನಿಮಾದ ಬಗ್ಗೆ ಹೆಚ್ಚಿನ ನಿರೀಕ್ಷೆ ಇದೆ. ಈ ತಿಂಗಳಲ್ಲಿ ತೆರೆಯ ಮೇಲೆ ಎಕ್ಸ್ ಆ್ಯಂಡ್‌ ವೈ ನೋಡಲು ನಾವು ಸಿದ್ಧರಾಗುವುದು ಮಾತ್ರ ಬಾಕಿ.

ಸತ್ಯ ಪ್ರಕಾಶ್ ಅವರ ನಟನೆ ನಿರ್ದೇಶನದಲ್ಲಿ ತಯಾರಾದ ಎಕ್ಸ್ ಆ್ಯಂಡ್ ವೈ ಸಿನಿಮಾದ ಟೀಸರ್ ನಿನ್ನೆ ಬಿಡುಗಡೆಗೊಂಡಿದೆ. ಟೀಸರ್ ನ್ನು ಯುಟ್ಯೂಬ್ ನಲ್ಲಿ ನೋಡಬಹುದು. ಸಿನಿಮಾ ಜೂನ್ 26 ರಂದು ರಾಜ್ಯಾದ್ಯಂತ ಅದ್ದೂರಿಯಾಗಿ ತೆರೆ ಕಾಣಲಿದೆ. ಸಿನಿಮಾದ ಕುರಿತು ಕಾತಾರ, ಕುತೂಹಲ ಹೆಚ್ಚಿದೆ ಅದಕ್ಕೆ ಕಾರಣವೂ ಇದೆ. ಸತ್ಯ ಪ್ರಕಾಶ್ ಈ ಹಿಂದೆ ಮಾಡಿದ್ದ ರಾಮಾ ರಾಮಾ ರೇ, ಒಂದಲ್ಲ ಎರಡಲ್ಲ, ಮ್ಯಾನ್ ಆಪ್ ದಿ ಮ್ಯಾಚ್ ಸೂಪರ್ ಹಿಟ್ಟ್ ಆಗಿತ್ತು. ಹೀಗಾಗಿ ಸಹಜವಾಗಿಯೇ ಎಕ್ಸ್ ಆ್ಯಂಡ್ ವೈ ಸಿನಿಮಾದ ಬಗ್ಗೆ ಪ್ರೇಕ್ಷಕರಲ್ಲಿ ಕುತೂಹಲ ಇಮ್ಮಡಿಗೊಳಿಸಿದೆ

ಪುನರ್ಜನ್ಮ, ಆತ್ಮ, ದೆವ್ವದ ಕಥೆಗಳು ಬಂದಿವೆ, ಆದರೆ ಹುಟ್ಟುವ ಮುನ್ನ ಮನುಷ್ಯನಲ್ಲಿರುವ ಎಕ್ಸ್‌ ಆ್ಯಂಡ್ ವೈ ವರ್ಣತಂತುಗಳೇ ತಮ್ಮ ಭವಿಷ್ಯದ ಬಗ್ಗೆ ಮಾತನಾಡುವ ಕಥೆ ‘ಎಕ್ಸ್‌ ಆ್ಯಂಡ್ ವೈ’ ಸಿನಿಮಾದಲ್ಲಿದೆ. ಭೂಮಿಗೆ ಬಂದ ಮೇಲೆ ಬದುಕುವುದು, ಸಾಯುವುದು, ಪುನರ್ಜನ್ಮ ಆಗುವುದೆಲ್ಲ ಇದ್ದೇ ಇದೆ. ಆದರೆ ಇನ್ನೂ ಭೂಮಿಗೆ ಬಂದಿರದ ವರ್ಣತಂತುಗಳು ಮಾತನಾಡಿದರೆ ಹೇಗೆ ಎಂಬ ಹಾಸ್ಯ ಪ್ರಧಾನ ಫ್ಯಾಂಟಿಸಿಯೇ ಈ ಸಿನಿಮಾ.

ಸತ್ಯ ಪ್ರಕಾಶ್ ಸರ್ ಅವರೊಂದಿಗೆ ಕೆಲಸ ಮಾಡುವುದೆಂದರೆ ನನಗೆ ಬಲು ಇಷ್ಟ. ಅವರೊಬ್ಬ ನಿರ್ದೇಶಕರಾಗಿ ಕಲಾವಿದರಿಗೆ ಹತ್ತಿರವಾಗುತ್ತಾರೆ. ಸಿನಿಮಾಕ್ಕೆ ಸಂಬಂಧಿಸಿದ ವಿಚಾರಗಳನ್ನು ಚರ್ಚಿಸುತ್ತಾರೆ. ನಾನು ಅವರ ನಿರ್ದೇಶನದ “ಮ್ಯಾನ್ ಆಫ್ ದಿ ಮ್ಯಾಚ್” ಸಿನಿಮಾದಲ್ಲಿ ಅಭಿನಯಿಸಿದ್ದೇನೆ. ನನ್ನಳೊಗೆ ಇರುವ ಕಲಾವಿದನನ್ನು ಚಿತ್ರರಂಗಕ್ಕೆ ಪರಿಚಯಿಸಿದ್ದೇ ಅವರು. ನಾನಿಂದು ಕಲಾವಿದನಾಗಿ ಹಂತಹಂತವಾಗಿ ಬೆಳೆಯಲು ಅವರೇ ಕಾರಣ. ಹೀಗಾಗಿ ಸತ್ಯ ಪ್ರಕಾಶ್ ಸರ್ ಎಂದರೆ ಗೌರವ, ಅಭಿಮಾನ. ಅವರ ನಿರ್ದೇಶನದಲ್ಲಿ ಬಹಳಷ್ಟು ಕಲಿತಿದ್ದೇನೆ, ಕಲಿಯುತ್ತಲೇ ಇದ್ದೇನೆ. ಜೂನ್ 26 ರಂದು ತೆರೆ ಕಾಣಲಿರುವ “ಎಕ್ಸ್ ಆ್ಯಂಡ್ ವೈ” ಸಿನಿಮಾದ ಬಿಡುಗಡೆಯ ಕುರಿತು ನಾನೂ ಕಾತರನಾಗಿದ್ದೇನೆ.‌ ಸಿನಿಮಾದಲ್ಲಿ ನನಗೊಂದು ಒಳ್ಳೆಯ ಪಾತ್ರ ನೀಡಿದ್ದಾರೆ

error: Content is protected !!