ಮಂಗಳೂರು: ವಾಟ್ಸ್ಯಾಪ್ನಲ್ಲಿ ಸುಳ್ಳು ಸುದ್ದಿ ಹರಡಿದ ಆರೋಪಿಗಳ ಮೇಲೆ ಬಜ್ಪೆ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. ಈ ಬಗ್ಗೆ ʻಮಂಗಳೂರು ಸಿಟಿ ಪೊಲೀಸ್ʼ ಫೇಸ್ಬುಕ್ ಪೇಜ್ನಲ್ಲಿ ಪೊಲೀಸರು, ಅಸಲಿ ಸುದ್ದಿ ಯಾವುದು ನಕಲಿ ಸುದ್ದಿ ಯಾವುದು ಎನ್ನುವುದನ್ನು ಫೋಟೋ ಸಮೇತ ಸ್ಪಷ್ಟಪಡಿಸಿದ್ದಾರೆ.
ʻವಾಟ್ಸ್ಯಾಪ್ನಲ್ಲಿ ಹರಿದಾಡಿದ ತಲ್ವಾರ್ ಹಿಡಿದ ಬೈಕ್ ಸವಾರರ ಫೋಟೋ ಮತ್ತು ವಾಯ್ಸ್ ಕ್ಲಿಪ್ ತಪ್ಪು ಮಾಹಿತಿಯಾಗಿದೆ. ಇಬ್ಬರು ಯುವಕರು ಮೂಡಬಿದ್ರೆಗೆ ಹೋಗುತ್ತಿದ್ದಾಗ ಹಿಂಬದಿಯ ಸವಾರ ತನ್ನ ಕೈಯಲ್ಲಿ ಆಕ್ವೇರಿಯಂ ಕಲ್ಲು ಮತ್ತು ಇ-ಸಿಗರೇಟ್ ಹಿಡಿದುಕೊಂಡಿದ್ದರು ಎಂದು ಸ್ಪಷ್ಟನೆ ನೀಡಿದ್ದಾರೆ. ಈ ಸಂಬಂಧ ಬಜ್ಪೆ ಠಾಣೆಯಲ್ಲಿ ತಪ್ಪು ಮಾಹಿತಿ ಹರಡಿದವರ ವಿರುದ್ಧ ಪ್ರಕರಣ ದಾಖಲಿಸಿ, ತನಿಖೆ ನಡೆಸಲಾಗುತ್ತಿದೆ.ʼ ಎಂದು ಪೊಲೀಸರು ಪ್ರಕಟಣೆ ಹೊರಡಿಸಿದ್ದಾರೆ.