ನೆಲ್ಯಾಡಿ : ಚಾಲಕನ ನಿಯಂತ್ರಣ ತಪ್ಪಿ ಖಾಸಗಿ ಬಸ್ ಪಲ್ಟಿಯಾದ ಘಟನೆ ನಿವಾರ ಬೆಳಗಿನ ಜಾವ ಬೆಂಗಳೂರು – ಮಂಗಳೂರು ರಾಷ್ಟ್ರೀಯ ಹೆದ್ದಾರಿಯ ಗುಂಡ್ಯ ಸಮೀಪ ನಡೆದಿದೆ. ಬೆಂಗಳೂರಿನಿ0ದ ಮಂಗಳೂರಿಗೆ ಬರುತ್ತಿದ್ದ ಖಾಸಗಿ ಬಸ್ಸೊಂದು ಚಾಲಕನ ನಿಯಂತ್ರಣ ತಪ್ಪಿ ಪಲ್ಟಿ ಹೊಡೆದು ರಸ್ತೆ ಬದಿಗೆ ಉರುಳಿದ್ದು, 16 ಮಂದಿ ಪ್ರಯಾಣಿಕರು ಗಾಯಗೊಂಡಿದ್ದಾರೆ.
ಬೆಳಗಿನ ಜಾವ ಪ್ರಯಾಣಿಕರು ನಿದ್ದೆಯ ಮುಂಪರೆಯಲ್ಲಿರುವ ಸಂದರ್ಭದಲ್ಲಿ ಗುಂಡ್ಯ ಸಮೀಪದ ಬರ್ಚಿನಹಳ್ಳಿ ತಿರುವಿನ ಬಳಿ ಚಾಲಕನ ನಿಯಂತ್ರಣ ತಪ್ಪಿ ಬಲಭಾಗಕ್ಕೆ ಪಲ್ಟಿ ಹೊಡೆದಿದೆ. ಘಟನೆಯ ವೇಳೆ ಬಸ್ಸಿನಲ್ಲಿ ಸುಮಾರು 30ಕ್ಕೂ ಹೆಚ್ಚು ಮಂದಿ ಪ್ರಯಾಣಿಸುತ್ತಿದ್ದರು. ಅದೃಷ್ಟವಶಾತ್ ಯಾವುದೇ ರೀತಿಯ ಯಾವುದೇ ಜೀವಹಾನಿ ಸಂಭವಿಸಿಲ್ಲ. ಘಟನೆಯಲ್ಲಿ ಗಾಯಗೊಂಡವರನ್ನು ಫಹದ್ (20) ಮೂಡಬಿದ್ರೆ, ರಂಝೀನ್(25) ಪರಂಗಿಪೇಟೆ, ಉಮ್ಮರ್ (53)ದೇರಳಕಟ್ಟೆ, ತಮೀನ್(19) ಪುತ್ತೂರು, ಇಷಾಮ್(19) ಸಾಲ್ಮರ ಪುತ್ತೂರು, ರುಕ್ಮಯ(24) ಉಪ್ಪಿನಂಗಡಿ, ಜಾಹಿರ್ (23) ಸಾಲೆತ್ತೂರು ಬಂಟ್ವಾಳ, ಶಮೀರ್ (28) ವಿಟ್ಲ, ಆನ್ಸರ್ (26) ವಿಟ್ಲ, ಸೋಮಶೇಖರ (55) ದಾಸರಪುರ ಬೆಂಗಳೂರು, ಶರತ್(35) ದಾಸರಪುರ ಬೆಂಗಳೂರು, ಡಾ. ಮಹಂತ್ ಗೌಡ (47) ನೆಲಮಂಗಲ ಬೆಂಗಳೂರು, ಸಿಮಾಕ್ (23), ಅಬ್ದುಲ್ ರಜೀದ್ (38) ಸಂಪ್ಯ ಪುತ್ತೂರು, ಪೌಝಿಲ್ (23), ಕೈಕಂಬ ಮೂಡುಬಿದ್ರೆ, ಅಲ್ತಾಫ್(28) ಎಂದು ಗುರುತಿಸಲಾಗಿದೆ.
ಗಾಯಾಳುಗಳನ್ನು ತಕ್ಷಣವೇ ನೆಲ್ಯಾಡಿ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿದ್ದು, ಇಬ್ಬರನ್ನು ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರು ಆಸ್ಪತ್ರೆಗೆ ಕರೆದೊಯ್ಯಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.