ಮಂಗಳೂರು: ಗ್ರಾಹಕರನ್ನು ಸತಾಯಿಸಿ ಮಾನಸಿಕ ಕಿರಿಕಿರಿ ಉಂಟು ಮಾಡುವುದನ್ನೇ ಕೆಲವು ಖಾಸಗಿ, ಸರಕಾರಿ ಬ್ಯಾಂಕ್ ಗಳು ತಮ್ಮದು ಗ್ರಾಹಕ ಸ್ನೇಹಿ ಸೇವೆ ಎಂದು ಭಾವಿಸಿದ್ದು ಇದರಿಂದಾಗಿ ಶ್ರೀಮಂತ ಗ್ರಾಹಕರಿಗಿಂತ ಬಡಪಾಯಿ ಗ್ರಾಹಕರೇ ಹೆಚ್ಚಿನ ಸಮಸ್ಯೆ ಎದುರಿಸುವಂತಾಗಿದೆ. ಈಗಾಗಲೇ ಬ್ಯಾಂಕ್ ಗಳ ಲೀನ್, ಫ್ರೀಜ್ ಶಿಕ್ಷೆಯಿಂದ ಕಂಗಾಲಾಗಿರುವ ಗ್ರಾಹಕರು ತಮ್ಮ ಸುರಕ್ಷತೆಗಾಗಿ ಕಾನೂನಾತ್ಮಕವಾಗಿ ಪ್ರತ್ಯೇಕ ಸಂಘಟನೆಯೊಂದನ್ನು ಹುಟ್ಟುಹಾಕಲು ನಿರ್ಧರಿಸಿದ್ದಾರೆ.
ಸಾಮಾನ್ಯವಾಗಿ ಬ್ಯಾಂಕ್ ಗಳಿಗೆ ಮೂರು ಲೇಯರ್ ಗಿಂತ ಹೆಚ್ಚಿನ ಲೀನ್ ಅಮೌಂಟ್ ಅನ್ನು ಕೂಡಲೇ ರಿಲೀಸ್ ಮಾಡಬೇಕೆಂಬ ಆರ್ ಬಿಐ ಸ್ಪಷ್ಟ ನಿರ್ದೇಶನವಿದ್ದರೂ ಬ್ಯಾಂಕ್ ಮೆನೇಜರ್ ಗಳು ನೀವೇ ಕ್ಲಿಯರೆನ್ಸ್ ಮಾಡಿಸಿ ಎಂದು ದುಂಡಾವರ್ತನೆ ಪ್ರದರ್ಶಿಸುತ್ತಿದ್ದಾರೆ ಎಂಬ ಆರೋಪಗಳು ಕೇಳಿಬರುತ್ತಿವೆ.
ನಗರದ ಹೆಸರಾಂತ ಕಾಲೇಜ್, ಆಸ್ಪತ್ರೆಗಳು, ಉದ್ದಿಮೆದಾರರು, ಎನ್ ಆರ್ ಐಗಳು ಇದೇ ಪರಿಸ್ಥಿತಿಯನ್ನು ನಿತ್ಯ ಅನುಭವಿಸುತ್ತಿದ್ದಾರೆ.
ಬಹುತೇಕ ಖಾಸಗಿ ಬ್ಯಾಂಕ್ ಮೆನೇಜರ್ ಗಳ ಈ ಕ್ರಮದಿಂದಾಗಿ ಜನರು ಬ್ಯಾಂಕ್ ವ್ಯವಹಾರಕ್ಕೂ ಹಿಂದೇಟು ಹಾಕುವಂತಾಗಿದೆ. ಆರ್ ಬಿಐಗೆ ದೂರು ನೀಡಿದರೂ ಸರಿಯಾದ ರೆಸ್ಪಾನ್ಸ್ ಸಿಗ್ತಾ ಇಲ್ಲ ಅನ್ನುವ ಆರೋಪ ಜನರದ್ದಾಗಿದೆ. ಉದ್ಯಮಿಗಳಿಂದ ಹಿಡಿದು ಎಳನೀರು ಮಾರುವವರೆಗೆ ಎಲ್ಲರ ಖಾತೆಯಲ್ಲೂ ಸಣ್ಣಪುಟ್ಟ ಅಮೌಂಟ್ ಗಳಿಗೆ ಫ್ರೀಜ್, ಲೀನ್ ಹಾಕುವ ಕಾರಣ ಜನರು ಬ್ಯಾಂಕಿಂಗ್ ವ್ಯವಹಾರ ಎಂದರೆ ಭಯಪಡುವ ಸನ್ನಿವೇಶ ನಿರ್ಮಾಣವಾಗಿದೆ. ಮೂರು ಲೇಯರ್ ತನಕ ಅಮೌಂಟ್ ಲೀನ್ ಆದಲ್ಲಿ ಸಂಬಂಧಪಟ್ಟ ದಾಖಲೆಗಳನ್ನು ಬ್ಯಾಂಕ್ ನಲ್ಲಿ ಕೇಳುತ್ತಾರೆ ಇದಕ್ಕಾಗಿ ಗ್ರಾಹಕರೇ ಸಂಬಂಧಪಟ್ಟ ಸೈಬರ್ ಠಾಣೆ ಮೂಲಕ ಹೋಗಿ ಲೀನ್ ಮಾಡಿಸಿಕೊಂಡು ಬರಬೇಕು. ಉದಾಹರಣೆಗೆ ದೆಹಲಿಯಲ್ಲಿ ಲೀನ್ ಆದರೆ ಅಲ್ಲಿನ ಪೊಲೀಸ್, ಸೈಬರ್ ಠಾಣೆ ಅಲೆದಾಡಬೇಕು. ಒಬ್ಬ ದಿನಗೂಲಿ ದುಡಿಯುವ ನೌಕರ ಅಲ್ಲಿಗೆ ಹೋಗಿ ಬರುವುದು ಸುಲಭದ ಮಾತಲ್ಲ. ಆದರೆ ಮೂರು ಲೇಯರ್ ಗಳಿಂದ ಜಾಸ್ತಿ ಲೀನ್ ಆದಲ್ಲಿ ಬ್ಯಾಂಕ್ ರಿಲೀಸ್ ಮಾಡಿಕೊಡಬೇಕು. ಆದರೆ ಸಾರ್ವಜನಿಕ ರಂಗದ ಖಾಸಗಿ ಮತ್ತು ಸರಕಾರಿ ಬ್ಯಾಂಕ್ ಗಳು ಯಾವುದನ್ನೂ ನಿಯಮ ಅನುಸಾರ ಮಾಡದೇ ಇರುವುದರಿಂದ ಗ್ರಾಹಕರು ಕಂಗಾಲಾಗಿದ್ದು ಪರ್ಯಾಯ ದಾರಿಯನ್ನು ಹುಡುಕುತ್ತಿದ್ದಾರೆ. ಒಟ್ಟಾರೆ ಯಾರೋ ಮಾಡಿದ ಸೈಬರ್ ಮೋಸದ ಜಾಲಕ್ಕೆ ಬಡಪಾಯಿ ಗ್ರಾಹಕರು ಬಲಿಯಾಗುತ್ತಿದ್ದು ಬ್ಯಾಂಕ್ ನಿಯಮಗಳ ವಿರುದ್ಧ ಅಸಹನೆ ವ್ಯಕ್ತಪಡಿಸುತ್ತಿದ್ದಾರೆ.