ಇಸ್ಲಾಮಾಬಾದ್: ನಮ್ಮ ಜತೆ ಮಾತುಕತೆಗೆ ಭಾರತವನ್ನು ನೀವೇ ಒಪ್ಪಿಸಬೇಕು ಎಂದು ಪಾಕಿಸ್ತಾನ ಪ್ರಧಾನಿ ಶೆಹಬಾಜ್ ಷರೀಫ್ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ಗೆ ಮನವಿ ಮಾಡಿದ್ದಾರೆ.
ಇತ್ತೀಚೆಗೆ ಇಸ್ಲಾಮಾಬಾದ್ನಲ್ಲಿರುವ ಅಮೆರಿಕದ ರಾಯಭಾರ ಕಚೇರಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಪಾಕಿಸ್ತಾನದ ಪ್ರಧಾನಿ ಶೆಹಬಾಜ್ ಷರೀಫ್, “ಭಾರತದೊಂದಿಗಿನ ಸಂಘರ್ಷ ತಗ್ಗಿಸುವಲ್ಲಿ ಅಮೆರಿಕದ ಪಾತ್ರವನ್ನು ಶ್ಲಾಘಿಸಿದ್ದಾರೆ. ಇದೇ ವೇಳೆ, ಅಮೆರಿಕವು ಎರಡು ಅಣ್ವಸ್ತ್ರ ಹೊಂದಿದ ನೆರೆಹೊರೆ ದೇಶಗಳ ನಡುವೆ ವಿಸ್ತೃತ ಮಾತುಕತೆಗೆ ಸಹಾಯ ಮಾಡಬೇಕು” ಎಂದು ಮನವಿ ಮಾಡಿದರು.
2025ರ ಏಪ್ರಿಲ್ 22ರಂದು ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್ನಲ್ಲಿ ಪಾಕಿಸ್ತಾನ ಮೂಲದ ಉಗ್ರರು ಅಮಾಯಕರ ಮೇಲೆ ದಾಳಿ ನಡೆಸಿ 26 ಜನರನ್ನು ಕೊಂದಿದ್ದರು. ಇದಕ್ಕೆ ಪ್ರತಿಕಾರವಾಗಿ ಭಾರತವು ‘ಆಪರೇಷನ್ ಸಿಂಧೂರ್’ ಅಡಿಯಲ್ಲಿ ಪಾಕಿಸ್ತಾನದ ಉಗ್ರರ ನೆಲೆಗಳನ್ನು ಧ್ವಂಸಗೊಳಿಸಿತ್ತು. ಇದಕ್ಕೂ ಮುಂಚೆ, ಭಾರತವು ಸಿಂಧೂ ನದಿ ನೀರಿನ ಒಪ್ಪಂದವನ್ನು ಸ್ಥಗಿತಗೊಳಿಸಿತ್ತು, ಇದರಿಂದ ಪಾಕಿಸ್ತಾನಕ್ಕೆ ಹರಿಯುವ ನೀರಿನ ಪೂರೈಕೆಗೆ ತಡೆಯೊಡ್ಡಿತು. ಈ ನಿರ್ಧಾರವು ಪಾಕಿಸ್ತಾನದಲ್ಲಿ ತೀವ್ರ ನೀರಿನ ಕೊರತೆಯನ್ನು ಸೃಷ್ಟಿಸಿದ್ದು, ವಿಮಾನ ನಿಲ್ದಾಣಗಳಲ್ಲಿಯೂ ನೀರಿನ ಅಭಾವದಿಂದ ಜನರು ಪರದಾಡುವಂತಾಗಿದೆ.
2025ರ ಮೇ 10ರಂದು ಎರಡೂ ದೇಶಗಳು ಕದನ ವಿರಾಮಕ್ಕೆ ಒಪ್ಪಿಗೆ ನೀಡಿದ್ದವು. ಪಾಕಿಸ್ತಾನವು ಸಿಂಧೂ ನದಿ ಒಪ್ಪಂದದ ಬಗ್ಗೆ ಮಾತುಕತೆಗೆ ಒಲವು ತೋರಿತ್ತಾದರೂ, ಭಾರತವು ಭಯೋತ್ಪಾದನೆ ಸಂಪೂರ್ಣವಾಗಿ ನಿರ್ಮೂಲನೆಯಾಗುವವರೆಗೆ ಈ ವಿಷಯದ ಬಗ್ಗೆ ಚರ್ಚೆಗೆ ಸಿದ್ಧವಿಲ್ಲ ಎಂದು ಸ್ಪಷ್ಟಪಡಿಸಿತು. ಪ್ರಧಾನಿ ನರೇಂದ್ರ ಮೋದಿ ಅವರು, “ರಕ್ತ ಮತ್ತು ನೀರು ಒಟ್ಟಿಗೆ ಹರಿಯಲು ಸಾಧ್ಯವಿಲ್ಲ,” ಎಂದು ಕರಾರುವಕ್ಕಾಗಿ ಹೇಳಿದ್ದರು.