ಬಿಪಿಎಲ್‌ ಕಾರ್ಡ್‌ನಿಂದ ಅರ್ಹರು ಬಿಟ್ಟು ಹೋಗಬಾರದು, ಅನರ್ಹರು ಸೇರಬಾರದು: ಸಿದ್ದರಾಮಯ್ಯ

ಬೆಂಗಳೂರು: ಬಿಪಿಎಲ್ ಕಾರ್ಡ್‌ಗಳು ಅನರ್ಹರಿಗೆ ಸಿಗುತ್ತಿರುವ ಬಗ್ಗೆ ಎಚ್ಚರ ವಹಿಸಬೇಕು. ಬಳ್ಳಾರಿ, ಯಾದಗಿರಿ, ಹಾವೇರಿಯಲ್ಲಿ ಶೇಕಡ 90ಕ್ಕಿಂತ ಹೆಚ್ಚಿದೆ. ಅರ್ಹರು ಬಿಟ್ಟು ಹೋಗಬಾರದು, ಅನರ್ಹರು ಸೇರಬಾರದು ಎಂಬ ಎಚ್ಚರಿಕೆ ಸದಾ ಇರಲಿ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಅಧಿಕಾರಿಗಳಿಗೆ ಸೂಚನೆ ನೀಡಿದರು.

ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿಗಳ ಜೊತೆಗಿನ ಸಭೆಯಲ್ಲಿ ಲೋಕೋಪಯೋಗಿ ಇಲಾಖೆಯಡಿ ಅಭಿವೃದ್ಧಿ ಕಾರ್ಯಕ್ರಮಗಳ ಬಗ್ಗೆ ಮುಖ್ಯಮಂತ್ರಿಗಳು ಪರಿಶೀಲನೆ ನಡೆಸಿದರು. ಅನ್ನಭಾಗ್ಯ ಯೋಜನೆಯಡಿ ನೀಡುವ ಅಕ್ಕಿಯ ದುರುಪಯೋಗಕ್ಕೆ ಬಿಪಿಎಲ್ ಕಾರ್ಡ್‌ಗಳು ಶೇ 90ಕ್ಕಿಂತ ಹೆಚ್ಚಾಗಿರುವುದನ್ನು ಪರಿಶೀಲಿಸಬೇಕು. ಮೂರನೇ ಪಕ್ಷದ ಸಂಸ್ಥೆಗಳಿಂದ ಪರಿಶೀಲನೆ ನಡೆಯಬೇಕು ಎಂದು ತಿಳಿಸಿದರು.

“ಅನ್ನಭಾಗ್ಯ ಯೋಜನೆಯಡಿ ನೀಡುವ ಅಕ್ಕಿಯ ದುರುಪಯೋಗ ತಡೆಯಿರಿ. ಸಾರ್ವಜನಿಕರು ಮಾರುಕಟ್ಟೆಯಲ್ಲಿ ಮಾರಿಕೊಳ್ಳುವ ಬಗ್ಗೆ ದೂರುಗಳು ಬರುತ್ತಿವೆ. ಇದರ ದುರುಪಯೋಗ ತಡೆಯಲು ಪರ್ಯಾಯವಾಗಿ ಬೇಳೆ, ಎಣ್ಣೆ ಕೊಡಬಹುದಾ ಪರಿಶೀಲಿಸಿ” ಎಂದು ಸಿಎಂ ಸೂಚಿಸಿದರು. ಜೊತೆಗೆ ರಾಷ್ಟ್ರೀಯ ಹೆದ್ದಾರಿ NH66 ಕಾಮಗಾರಿ 2016ರಿಂದಲೂ ಅಪೂರ್ಣವಾಗಿರುವ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದರು. “ಕಳೆದ ಒಂಬತ್ತು ವರ್ಷಗಳಿಂದ ಕಾಮಗಾರಿ ಮುಗಿಯದಿರುವುದನ್ನು ಒಪ್ಪಲು ಸಾಧ್ಯವಿಲ್ಲ. ಭೂಸ್ವಾಧೀನ ಪ್ರಕ್ರಿಯೆ ಸಮಸ್ಯೆಗಳನ್ನು ಬಗೆಹರಿಸಿಕೊಂಡು ಶೀಘ್ರ ಮುಗಿಸಬೇಕು” ಎಂದು ಇಲಾಖೆಯ ಕಾರ್ಯದರ್ಶಿಗಳಿಗೆ ಸೂಚಿಸಿದರು.

“ಯುವ ನಿಧಿ ಕಾರ್ಯಕ್ರಮದ ಉದ್ದೇಶ ನಿರುದ್ಯೋಗಿಗಳಿಗೆ ಉದ್ಯೋಗ ಸಿಗಬೇಕು ಎನ್ನುವುದು. ಒಬ್ಬ ಪದವೀಧರನಿಗೆ ಗರಿಷ್ಠ ಎರಡು ವರ್ಷಗಳ ಕಾಲ ನಿರುದ್ಯೋಗ ಭತ್ಯೆ ಸಿಗುತ್ತಿದೆ.‌ ಅವರ ಕೌಶಲ್ಯಕ್ಕೆ ತಕ್ಕಂತೆ ತರಬೇತಿ ನೀಡಿ ಉದ್ಯೋಗ ಸಿಗಲು ಅವಕಾಶವಾಗುವಂತೆ ಕ್ರಮ ವಹಿಸಬೇಕು” ಎಂದರು. “ಅಕ್ಕ ಕೆಫೆಗಳಿಗೆ ಎಲ್ಲೆಲ್ಲಿ ಜಾಗ ನೀಡಲಾಗಿದೆ ಅಲ್ಲಿ ಕೆಫೆಗಳು ಕಾರ್ಯಾರಂಭ ಮಾಡಬೇಕು” ಎಂದು ಮುಖ್ಯಮಂತ್ರಿಗಳು ಸೂಚಿಸಿದರು.

“ಹಿಂದೆಲ್ಲ ಡೈರಿ ಬರೆಯುವ ರೂಢಿ ಇತ್ತು. ಎಷ್ಟು ಜನ ಅಧಿಕಾರಿಗಳಿಗೆ ಡೈರಿ ಬರೆಯುವ ಅಭ್ಯಾಸ ಇದೆ” ಎಂದು ಪ್ರಶ್ನಿಸಿದ ಮುಖ್ಯಮಂತ್ರಿ ಡೈರಿ ಬರೆಯುವುದು ಉತ್ತಮ ಅಭ್ಯಾಸವಾಗಿದ್ದು ಅದನ್ನು ರೂಢಿಸಿಕೊಳ್ಳಿ ಎಂದರು.

error: Content is protected !!