ಎ.16ಕ್ಕೆ ಮದುವೆ, 22ಕ್ಕೆ ಶೂಟೌಟ್!‌ ನೌಕಾಸೇನೆ ಅಧಿಕಾರಿ ವಿನಯ್‌ ದುರಂತ ಅಂತ್ಯ!

ಶ್ರೀನಗರ: ಮದುವೆ ಆಗಿ 7 ದಿನದಲ್ಲಿ ನೌಕಾಸೇನೆ ಅಧಿಕಾರಿ ವಿನಯ್ ನರ್ವಾಲ್ ಅವರನ್ನು ಪತ್ನಿ ಎದುರು ಗುಂಡಿಕ್ಕಿ ಕೊಲ್ಲಲಾಗಿದೆ. ಕೊಚ್ಚಿಯಲ್ಲಿ ನಿಯೋಜನೆಗೊಂಡಿದ್ದ ಭಾರತೀಯ ನೌಕಾಪಡೆಯ ಅಧಿಕಾರಿ ವಿನಯ್ ನರ್ವಾಲ್ ಅವರು ಏಪ್ರಿಲ್ 16 ರಂದು ವಿವಾಹವಾದರು. ನಿನ್ನೆ ಮಧ್ಯಾಹ್ನ ಪಹಲ್ಗಾಮ್‌ನಲ್ಲಿ ಪತ್ನಿಯೊಂದಿಗೆ ಪ್ರವಾಸದಲ್ಲಿ ಇದ್ದಾಗ ಅವರ ಮೇಲೆ ಉಗ್ರರು ಗುಂಡು ಹಾರಿಸಿ ಅಟ್ಟಹಾಸ ಮೆರೆದಿದ್ದಾರೆ. ಭಯೋತ್ಪಾದಕರ ಈ ದಾಳಿಯಲ್ಲಿ 16 ಜನರು ಸಾವನ್ನಪ್ಪಿದ್ದು, ಹೈದರಾಬಾದ್‌ನಲ್ಲಿ ನಿಯೋಜಿತವಾಗಿದ್ದ ಐಬಿ ಸೆಕ್ಷನ್ ಅಧಿಕಾರಿ ಮನೀಶ್ ರಂಜನ್ ಕೂಡ ಭಯೋತ್ಪಾದಕ ದಾಳಿಯಲ್ಲಿ ಸಾವನ್ನಪ್ಪಿದ್ದಾರೆ. ಹೀಗೆ ತಮ್ಮವರನ್ನು ಕಳೆದುಕೊಂಡ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.

ವಿನಯ್ ನರ್ವಾಲ್ ಮೂಲತಃ ಕರ್ನಾಲ್ ಜಿಲ್ಲೆಯ ಭುಸ್ಲಿ ಗ್ರಾಮದ ನಿವಾಸಿ. ಅವರ ಕುಟುಂಬ ಸೆಕ್ಟರ್ -7 ರಲ್ಲಿ ವಾಸಿಸುತ್ತಿದೆ. ಬಿ.ಟೆಕ್ ಮಾಡಿದ ನಂತರ ಅವರು ಭಾರತೀಯ ನೌಕಾಪಡೆಗೆ ಸೇರಿದರು. 3 ವರ್ಷಗಳ ಹಿಂದೆ ಲೆಫ್ಟಿನೆಂಟ್ ಆಗಿ ನೌಕಾಪಡೆಗೆ ಸೇರಿದರು. ಕೊಚ್ಚಿಯಲ್ಲಿ ಅವರ ಕರ್ತವ್ಯವಿತ್ತು. ವಿನಯ್ ಅವರ ತಂದೆ ಪಾಣಿಪತ್‌ನ ಕಸ್ಟಮ್ಸ್ ಇಲಾಖೆಯಲ್ಲಿ ಸೂಪರಿಂಟೆಂಡೆಂಟ್ ಆಗಿ ನೇಮಕಗೊಂಡಿದ್ದಾರೆ. ವಿನಯ್ ನರ್ವಾಲ್ ಅವರು ಏಪ್ರಿಲ್ 16 ರಂದು ಮದುವೆ ಮಾಡಿಕೊಂಡರು. ನಂತರ ಪತ್ನಿಯೊಂದಿಗೆ ಪಹಲ್ಗಾಮ್‌ಗೆ ತೆರಳಿದ್ದರು. ‘ನಾನು ನನ್ನ ಪತಿಯೊಂದಿಗೆ ಭೇಲ್ಪುರಿ ತಿನ್ನುತ್ತಿದ್ದೆ, ಅಷ್ಟರಲ್ಲಿ ಒಬ್ಬ ವ್ಯಕ್ತಿ ಬಂದನು. ನೀವು ಮುಸ್ಲಿಂ ಅಥವಾ ಹಿಂದೂನಾ’ ಎಂದು ಹೇಳುತ್ತಿದ್ದಾರೆ. ನನ್ನ ಪತಿ ಮುಸ್ಲಿಂ ಅಲ್ಲ ಎಂದು ಹೇಳಿದರು. ನಂತರ ಅವನು ಪತಿಗೆ ಗುಂಡು ಹಾರಿಸಿದ ಎಂದು ಪತ್ನಿ ಹೇಳಿದ್ದಾರೆ.  ಈ ದಾಳಿಯನ್ನು 2019 ರ ಪುಲ್ವಾಮಾ ದಾಳಿಯ ನಂತರ ಕಣಿವೆಯಲ್ಲಿ ನಡೆದ ಅತ್ಯಂತ ಮಾರಕ ದಾಳಿ ಎನ್ನಲಾಗಿದೆ. ಮೃತರಲ್ಲಿ ಇಬ್ಬರು ವಿದೇಶಿಯರು ಮತ್ತು ಇಬ್ಬರು ಸ್ಥಳೀಯರು ಸೇರಿದ್ದಾರೆ.

error: Content is protected !!