ಅದಾನಿ ಪವರ್ ಕರಾವಳಿಗೆ ದಿನದ 24 ಗಂಟೆ ವಿದ್ಯುತ್ ಪೂರೈಕೆ ಮಾಡಲಿ- ತೋನ್ಸೆ ಜಯಕೃಷ್ಣ ಶೆಟ್ಟಿ ಒತ್ತಾಯ

ಉಡುಪಿ: ಜಿಲ್ಲೆಯ ಪಡುಬಿದ್ರಿ ಬಳಿ ಕಾರ್ಯಾಚರಿಸುತ್ತಿರುವ ಅದಾನಿ ಪವರ್ ಲಿ. ,ದಿನದ 24 ಗಂಟೆಗಳ ಕಾಲ ನಿರಂತರ ವಿದ್ಯುತ್ ಸರಬ ರಾಜು ಮಾಡಬೇಕು ಎಂದು ಜಯಶ್ರೀಕೃಷ್ಣ ಪರಿಸರ ಪ್ರೇಮಿ ಸಮಿತಿಯ ಸ್ಥಾಪಕಾಧ್ಯಕ್ಷ ತೋನ್ಸೆ ಜಯಕೃಷ್ಣ ಶೆಟ್ಟಿ ರಾಜ್ಯದ ಇಂಧನ ಸಚಿವ ಕೆ.ಜೆ. ಜಾರ್ಜ್ ಅವರನ್ನು ಒತ್ತಾಯಿಸಿದ್ದಾರೆ.

ಉಡುಪಿಯಲ್ಲಿ ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಮಿತಿಯ ಸತತ ಹೋರಾಟದ ಬಳಿಕ ಯುಪಿಸಿಎಲ್‌ನ 1300ಮೆಗಾ ವ್ಯಾಟ್ ಸಾಮರ್ಥ್ಯದ ಉಷ್ಣ ವಿದ್ಯುತ್ ಸ್ಥಾವರ 2010ರಿಂದ ಕಾರ್ಯಾಚರಣೆ ಪ್ರಾರಂಭಿಸಿದ್ದು, ಇಲ್ಲಿ ಉತ್ಪಾದನೆಯಾಗುವ ವಿದ್ಯುತ್‌ನ್ನು ಕರಾವಳಿ ಜಿಲ್ಲೆಗಳಿಗೆ ನೀಡಿ ಉಳಿದುದನ್ನು ಹೊರ ಜಿಲ್ಲೆ ಹೊರ ರಾಜ್ಯಗಳಿಗೆ ನೀಡಬೇಕು ಎಂದು ಸಮಿತಿ ಅಂದಿನ ಇಂಧನ ಸಚಿವ ಕೆ.ಎಸ್.ಈಶ್ವರಪ್ಪರ ಬಳಿ ಆಗ್ರಹಿಸಿತ್ತು. ಸರಕಾರ ಹಾಗೂ ಕಂಪೆನಿ ಇದಕ್ಕೆ ಒಪ್ಪಿಗೆಯನ್ನೂ ಸೂಚಿಸಿತ್ತು ಎಂದು ಜಯಕೃಷ್ಣ ಶೆಟ್ಟಿ ತಿಳಿಸಿದರು.

ಈಗ ಇಲ್ಲಿ ಉತ್ಪಾದನೆಯಾಗುವ ವಿದ್ಯುತ್‌ನಲ್ಲಿ ಶೇ.45ರಷ್ಟು ರಾಜ್ಯದ ರಾಜಧಾನಿ ಬೆಂಗಳೂರಿಗೆ ಸರಬ ರಾಜು ಆಗುತ್ತಿದ್ದು, ಅವಳಿ ಜಿಲ್ಲೆಗಳಿಗೆ ದಿನ 24 ಗಂಟೆ ವಿದ್ಯುತ್ ಸರಬರಾಜು ಆಗುತ್ತಿಲ್ಲ ಎಂಬುದು ಅತ್ಯಂತ ದುಃಖದ ಸಂಗತಿ. ಇಲ್ಲಿನ ನೆಲ,ಜಲ ಬಳಸಿಕೊಂಡಿರುವ ಕಂಪೆನಿ ಕರಾವಳಿಯ ಅಭಿವೃದ್ಧಿಗೆ ಮೂಲಧಾತುವಾದ ವಿದ್ಯುತ್ ಸರಬರಾಜಿನಲ್ಲಿ ಅವಳಿ ಜಿಲ್ಲೆ ಗಳಿಗೆ ಮೊದಲ ಪ್ರಾಶಸ್ತ್ರ ನೀಡಬೇಕು ಎಂದು ಅವರು ಒತ್ತಾಯಿಸಿದರು.

error: Content is protected !!