
ಮಂಗಳೂರು: ನಗರದ ಜಿಲ್ಲಾ ಕೇಂದ್ರ ಕಾರಾಗೃಹದಲ್ಲಿ ಅಳವಡಿಸಲಾಗಿರುವ ಜಾಮರ್ನಿಂದಾಗಿ ಕಳೆದ ಒಂದೂವರೆ ವರ್ಷದಿಂದ ಸುತ್ತಮುತ್ತಲಿನ ಸಾರ್ವಜನಿಕರು ಮೊಬೈಲ್ ನೆಟ್ವರ್ಕ್ ಸಿಗದೇ ತೀವ್ರ ಸಮಸ್ಯೆ ಅನುಭವಿಸುತ್ತಿದ್ದರೂ, ರಾಜ್ಯ ಕಾಂಗ್ರೆಸ್ ಸರ್ಕಾರ ಕಾಲಹರಣ ಮಾಡಿದೆಯೇ ಹೊರತು ಇಚ್ಛಾಶಕ್ತಿ ತೋರಿಲ್ಲ. ಕೂಡಲೇ ಕಾಲಮಿತಿ ನಿಗದಿಪಡಿಸಿ ಸಮಸ್ಯೆ ಇತ್ಯರ್ಥಪಡಿಸುವಂತೆ ಶಾಸಕ ವೇದವ್ಯಾಸ ಕಾಮತ್ ರವರು ಅಧಿವೇಶನದಲ್ಲಿ ಮತ್ತೊಮ್ಮೆ ಆಗ್ರಹಿಸಿದರು.
ಸಾರ್ವಜನಿಕರ ಬೇಡಿಕೆಯಂತೆ ಕಳೆದ ಒಂದೂವರೆ ವರ್ಷದಿಂದ ಸಂಬಂಧಪಟ್ಟವರಲ್ಲಿ ಹಲವು ಬಾರಿ ಮನವಿ ಮಾಡಲಾಗಿದೆ. ಪ್ರತಿಭಟನೆಗಳಾಗಿವೆ. ಅಂದಿನ ಜಿಲ್ಲಾ ಉಸ್ತುವಾರಿ ಸಚಿವರಿಗೆ, ಗೃಹ ಸಚಿವರಿಗೆ ಮಾತ್ರವಲ್ಲದೇ, ಅಧಿವೇಶನದಲ್ಲೂ ನಾನೇ ಪ್ರಸ್ತಾಪಿಸಿದ್ದೇನೆ. ಜಿಲ್ಲಾ ನ್ಯಾಯಾಲಯದ ವಕೀಲರು ಸಹ ಈ ಬಗ್ಗೆ ಹೈಕೋರ್ಟ್ ಗೆ ಹೋಗಿದ್ದಾರೆ. ಆದರೂ ದಪ್ಪ ಚರ್ಮದ ರಾಜ್ಯ ಕಾಂಗ್ರೆಸ್ ಸರ್ಕಾರ ಸಮಸ್ಯೆ ಬಗೆಹರಿಸಲು ನಿರ್ಲಕ್ಷ್ಯ ತೋರಿದೆ ಎಂದರು.

ಈ ಜಾಮರ್ ತೆರವಿಗೆ ಸರ್ಕಾರ ಕ್ರಮಗಳೇನು ಎಂದು ಪ್ರಶ್ನಿಸಿದಾಗೆಲ್ಲಾ, ಈ ಬಗ್ಗೆ ಸಭೆಗಳನ್ನು ನಡೆಸಿದ್ದೇವೆ, ಕ್ರಮಕೈಗೊಳ್ಳುತ್ತೇವೆ, ಎಂದಷ್ಟೇ ಉತ್ತರ ನೀಡಲಾಗಿದೆ ಹೊರತು ಯಾವುದೇ ಕಾರ್ಯಗತವಾಗಿಲ್ಲ. ಕೂಡಲೇ ಈ ಸಮಸ್ಯೆ ಇತ್ಯರ್ಥಕ್ಕೆ ಕನಿಷ್ಠ ಕಾಲಮಿತಿ ನಿಗದಿಪಡಿಸಿ ಕಾರ್ಯ ನಿರ್ವಹಿಸಿ ಎಂದು ಶಾಸಕರು ರಾಜ್ಯ ಸರ್ಕಾರವನ್ನು ಆಗ್ರಹಿಸಿದರು.