ಹೈದರಾಬಾದ್: ಆಂಧ್ರಪ್ರದೇಶ ಪೊಲೀಸರು ದೇಶದ ವಿವಿಧ ರಾಜ್ಯಗಳಲ್ಲಿ ನಡೆಸಿದ ಮಿಂಚಿನ ಕಾರ್ಯಾಚರಣೆಯಲ್ಲಿ ಉಗ್ರಗಾಮಿ ಜಾಲಗಳೊಂದಿಗೆ ಸಂಪರ್ಕ ಹೊಂದಿದ್ದ ಶಂಕಿತ 12 ಮಂದಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ವಿವಿಧ ರಾಜ್ಯಗಳ ಪೊಲೀಸರ ಸಮನ್ವಯದೊಂದಿಗೆ ನಡೆದ ಈ ಕಾರ್ಯಾಚರಣೆಯು ದೊಡ್ಡ ಮಟ್ಟದ ಸಂಚನ್ನು ವಿಫಲಗೊಳಿಸಿದೆ.

ಬಂಧಿತರಲ್ಲಿ ಆಂಧ್ರಪ್ರದೇಶದ ಮೊಹಮ್ಮದ್ ರಹಮತುಲ್ಲಾ ಶರೀಫ್, ಮಿರ್ಜಾ ಸೋಹೈಲ್ ಬೇಗ್ ಮತ್ತು ಮೊಹಮ್ಮದ್ ದಾನಿಶ್ ಪ್ರಮುಖ ಸಂಚಾಲಕರಾಗಿದ್ದು, ಇವರು ಕೇವಲ ಸದಸ್ಯರಾಗಿರದೆ ಜಾಲದ ನೇತೃತ್ವ ವಹಿಸಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ. ಇವರು ಯುವಕರನ್ನು ತೀವ್ರಗಾಮಿಗಳನ್ನಾಗಿ ಮಾಡಲು ‘ಅಲ್ ಮಲಿಕ್ ಇಸ್ಲಾಮಿಕ್ ಯೂತ್’ ಎಂಬ ಸಂಘಟನೆಯನ್ನು ರೂಪಿಸಿಕೊಂಡಿದ್ದರು.
ಈ ಜಾಲವು ಮಹಿಳೆಯರನ್ನು ನೇಮಕ ಮಾಡಿಕೊಳ್ಳಲು ʻಖವಾತೀನ್’ ಎಂಬ ಪ್ರತ್ಯೇಕ ವಿಭಾಗವನ್ನೇ ಹೊಂದಿತ್ತು ಎಂಬ ಆಘಾತಕಾರಿ ವಿಷಯ ಬಯಲಾಗಿದೆ. ಇದರ ಭಾಗವಾಗಿ ಹೈದರಾಬಾದ್ನಲ್ಲಿ ಸಯೀದಾ ಬೇಗಂ ಎಂಬಾಕೆಯನ್ನು ಬಂಧಿಸಲಾಗಿದ್ದು, ಈಕೆ ಪಾಕಿಸ್ತಾನ ಮತ್ತು ಜಮ್ಮು-ಕಾಶ್ಮೀರದ ಉಗ್ರರೊಂದಿಗೆ ನಿರಂತರ ಸಂಪರ್ಕದಲ್ಲಿದ್ದಳು ಎಂದು ತನಿಖೆಯಿಂದ ತಿಳಿದುಬಂದಿದೆ. ಡಿಜಿಟಲ್ ವೇದಿಕೆಗಳಲ್ಲಿ ಪ್ರಚಾರ ನಡೆಸಲು ಮಹಿಳೆಯರನ್ನು ಬಳಸಿಕೊಳ್ಳಲಾಗುತ್ತಿತ್ತು.

ತನಿಖಾಧಿಕಾರಿಗಳ ಪ್ರಕಾರ, ಬಂಧಿತ ಆರೋಪಿಗಳಲ್ಲಿ ಕೆಲವರು ಮುಂದಿನ ಒಂದು ತಿಂಗಳೊಳಗೆ ತರಬೇತಿಗಾಗಿ ಪಾಕಿಸ್ತಾನ ಮತ್ತು ಅಫ್ಘಾನಿಸ್ತಾನಕ್ಕೆ ತೆರಳಲು ಸಿದ್ಧತೆ ನಡೆಸಿದ್ದರು. ಇವರು ಗಡಿಯಾಚೆಗಿನ ಹ್ಯಾಂಡ್ಲರ್ಗಳಾದ ಅಲ್-ಹಕೀಮ್ ಶುಕೂರ್ ಮತ್ತು ಮೊಹಮ್ಮದ್ ಹುಜೈಫಾ ಅವರ ಮಾರ್ಗದರ್ಶನದಂತೆ ನೇಮಕಾತಿ ಮತ್ತು ಕಾರ್ಯಾಚರಣೆಯ ಯೋಜನೆಗಳನ್ನು ರೂಪಿಸುತ್ತಿದ್ದರು.
ಕೇವಲ ಸಿದ್ಧಾಂತಗಳ ಪ್ರಚಾರಕ್ಕಷ್ಟೇ ಸೀಮಿತವಾಗದೆ, ಈ ಗುಂಪು ವಿಧ್ವಂಸಕ ಕೃತ್ಯಗಳಿಗೂ ಸಜ್ಜಾಗಿತ್ತು. ಸ್ಫೋಟಕಗಳನ್ನು ತಯಾರಿಸುವ ವಿಧಾನಗಳಿರುವ ಪಿಡಿಎಫ್ ಕೈಪಿಡಿಗಳು ಮತ್ತು ವಿಡಿಯೋಗಳನ್ನು ಇವರು ಹಂಚಿಕೊಳ್ಳುತ್ತಿದ್ದರು. ಅಲ್ಲದೆ, ಸಾಮಾಜಿಕ ಜಾಲತಾಣಗಳಲ್ಲಿ ರಾಷ್ಟ್ರಧ್ವಜದ ಬದಲು ಉಗ್ರ ಸಂಘಟನೆಗಳ ಚಿಹ್ನೆಗಳನ್ನು ಬಳಸಿ ರಾಷ್ಟ್ರೀಯ ಸಂಕೇತಗಳನ್ನು ಅವಮಾನಿಸುತ್ತಿದ್ದರು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಪ್ರಸ್ತುತ ಬಂಧಿತರಿಂದ ಮೊಬೈಲ್ ಫೋನ್ ಮತ್ತು ಇತರ ಡಿಜಿಟಲ್ ದಾಖಲೆಗಳನ್ನು ವಶಪಡಿಸಿಕೊಳ್ಳಲಾಗಿದ್ದು, ಹಣಕಾಸಿನ ಮೂಲಗಳ ಬಗ್ಗೆ ತನಿಖೆ ಮುಂದುವರಿದಿದೆ. ಗೂಢಲಿಪೀಕೃತ ಸಂವಹನ ವ್ಯವಸ್ಥೆಯನ್ನು ಭೇದಿಸುವ ಮೂಲಕ ಈ ಜಾಲದ ಉಳಿದ ಕೊಂಡಿಗಳನ್ನು ಪತ್ತೆಹಚ್ಚಲು ಆಂಧ್ರ ಪೊಲೀಸರು ಕಾರ್ಯಪ್ರವೃತ್ತರಾಗಿದ್ದಾರೆ.