ಉಡುಪಿ: ಭಾರತಕ್ಕೆ ಅಕ್ರಮವಾಗಿ ಪ್ರವೇಶಿಸಿ ಮಲ್ಪೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನೆಲೆಸಿದ್ದ 10 ಮಂದಿ ಬಾಂಗ್ಲಾದೇಶಿ ವಲಸಿಗರಿಗೆ ಉಡುಪಿಯ ಪ್ರಧಾನ ಹಿರಿಯ ಸಿವಿಲ್ ನ್ಯಾಯಾಧೀಶ ಮತ್ತು ಸಿಜೆಎಂ ನ್ಯಾಯಾಲಯವು 2 ವರ್ಷದ ಜೈಲು ಶಿಕ್ಷೆ ಹಾಗೂ ತಲಾ ₹10,000 ದಂಡ ವಿಧಿಸಿ ಡಿಸೆಂಬರ್ 8ರಂದು ಆದೇಶ ಹೊರಡಿಸಿದೆ.

ಬಾಂಗ್ಲಾದೇಶದ ಪ್ರಜೆಗಳಾದ ಹಕೀಮ್ ಆಲಿ, ಸುಜೋನ್ ಎಸ್.ಕೆ. (ಫಾರೂಕ್), ಇಸ್ಮಾಯಿಲ್ ಎಸ್.ಕೆ., ಮುಹಮ್ಮದ್ ಇಸ್ಮಾಯಿಲ್ ಹಾಕ್, ಕರೀಂಎಸ್.ಕೆ. (ಅಬ್ದುಲ್ ಕರೀಂ), ಸಲಾಂ ಎಸ್.ಕೆ. (ಎಂ.ಡಿ. ಅಬ್ದುಲ್ ಅಜೀಜ್), ರಾಜಿಕುಲ್ ಎಸ್.ಕೆ., ಮುಹಮ್ಮದ್ ಸೋಜಿಬ್ (ಎಂ.ಡಿ. ಅಲ್ಲಾಂ ಅಲಿ), ರಿಮೂಲ್ (ಅಬ್ದುಲ್ ರೆಹಮಾನ್), ಮುಹಮ್ಮದ್ ಇಮಾಮ್ ಶೇಖ್ ಹಾಗೂ ಮುಹಮ್ಮದ್ ಜಹಾಂಗಿರ್ ಆಲಂ ಶಿಕ್ಷೆಗೆ ಗುರಿಯಾದವರು.

ಘಟನೆ ಹಿನ್ನಲೆ: 2024ರ ಅಕ್ಟೋಬರ್ 11ರಂದು ಸಂಜೆ ಮಲ್ಪೆ ವಡಭಾಂಡೇಶ್ವರ ಬಸ್ ನಿಲ್ದಾಣದ ಬಳಿ ಲಗೇಜ್ಗಳನ್ನು ಹೊತ್ತು ಅನುಮಾನಾಸ್ಪದವಾಗಿ ತಿರುಗಾಡುತ್ತಿದ್ದ ಏಳು ಮಂದಿಯನ್ನು ತಡೆದು ವಿಚಾರಣೆ ನಡೆಸಿದರು. ಪರಿಶೀಲನೆ ವೇಳೆ ಅವರು ಯಾವುದೇ ವಿಧದ ಮಾನ್ಯ ದಾಖಲೆಗಳಿಲ್ಲದೆ ಭಾರತಕ್ಕೆ ಅಕ್ರಮವಾಗಿ ಬಂದಿದ್ದು, ನಕಲಿ ಆಧಾರ್ ಕಾರ್ಡ್ಗಳನ್ನು ಸೃಷ್ಟಿಸಿಕೊಂಡಿರುವುದು ಪತ್ತೆಯಾಯಿತು.
ಮುಂದಿನ ತನಿಖೆಯಲ್ಲಿ ಅವರು ಬಾಂಗ್ಲಾದೇಶದಿಂದ ನೇರವಾಗಿ ಉಡುಪಿ ತಾಲೂಕಿನ ಪಡುತೋನ್ಸೆ ಗ್ರಾಮದ ಹೂಡೆ ಪ್ರದೇಶಕ್ಕೆ ಬಂದಿರುವುದು ಬೆಳಕಿಗೆ ಬಂತು. ಇದಾದ ಬಳಿಕ ಮಲ್ಪೆ ಪೊಲೀಸರು ಅವರನ್ನು ವಶಕ್ಕೆ ಪಡೆದು ಪ್ರಕರಣ ದಾಖಲಿಸಿದರು. ಆಗಿನ ಮಲ್ಪೆ ಪೊಲೀಸ್ ವೃತ್ತ ನಿರೀಕ್ಷಕರು ಪ್ರಕರಣದ ತನಿಖೆ ನಡೆಸುವ ವೇಳೆ ಉಳಿದ ಮೂರು ಮಂದಿ ಅಕ್ರಮ ವಲಸಿಗರನ್ನೂ ಬಂಧಿಸಿದರು. ಒಟ್ಟು 10 ಮಂದಿ ವಿರುದ್ಧ ಉಡುಪಿ ನ್ಯಾಯಾಲಯಕ್ಕೆ ದೋಷಾರೋಪಣ ಪಟ್ಟಿ ಸಲ್ಲಿಸಲಾಯಿತು.

ಪ್ರಕರಣದ ವಿಚಾರಣೆ ಪೂರ್ಣಗೊಳಿಸಿದ ನ್ಯಾಯಾಲಯ, ಅಕ್ರಮ ಪ್ರವೇಶ, ನಕಲಿ ದಾಖಲೆ ತಯಾರಿಕೆ ಹಾಗೂ ಭಾರತೀಯ ಕಾನೂನು ಅವಹೇಳನ ಮಾಡಿದ ಆರೋಪಗಳು ಸಾಬೀತಾಗಿದ್ದರಿಂದ 2 ವರ್ಷಗಳ ಜೈಲು ಶಿಕ್ಷೆ ಹಾಗೂ ತಲಾ ₹10,000 ದಂಡ ವಿಧಿಸಿ ಆದೇಶ ಹೊರಡಿಸಿದೆ.