ದೆಹಲಿ: ದೆಹಲಿಯ ರೋಹಿಣಿ ಪ್ರದೇಶದಲ್ಲಿ ಬೆಳಗಿನ ಜಾವ ನಡೆದ ಪೊಲೀಸ್ ಎನ್ಕೌಂಟರ್ನಲ್ಲಿ ಸಿಗ್ಮಾ ಗ್ಯಾಂಗ್ ನ ನಾಲ್ವರು ʼಮೋಸ್ಟ್ ವಾಂಟೆಡ್ʼ ಗ್ಯಾಂಗ್ಸ್ಟರ್ ಗಳು ಹತ್ಯೆ ಮಾಡಲಾಗಿದೆ. ದೆಹಲಿ ಮತ್ತು ಬಿಹಾರ ಪೊಲೀಸರ ಸಂಯುಕ್ತ ತಂಡಕ್ಕೆ ಮತ್ತು ಗ್ಯಾಂಗ್ಸ್ಟರ್ಗಳ ನಡುವೆ ವಾಯುವ್ಯ ದೆಹಲಿಯಲ್ಲಿ ಬೆಳಗಿನ ಜಾವ 2.20 ಗಂಟೆಗೆ ತೀವ್ರ ಗುಂಡಿನ ಚಕಮಕಿ ನಡೆದಿತ್ತು.

ರಂಜನ್ ಪಾಠಕ್ (25 ವರ್ಷ), ಬಿಮ್ಲೇಶ್ ಮಹ್ತೋ (25 ವರ್ಷ), ಮನೀಶ್ ಪಾಠಕ್ (33 ವರ್ಷ) ಮತ್ತು ಅಮನ್ ಠಾಕೂರ್ (21 ವರ್ಷ) ಅವರುಗಳನ್ನು ಗುರುತಿಸಲಾಗಿದೆ. ರಂಜನ್ ಪಾಠಕ್ ಈ ಗ್ಯಾಂಗ್ ನ ಮುಖ್ಯಸ್ಥನಾಗಿದ್ದ. ಈ ಸಿಗ್ಮಾ ಗ್ಯಾಂಗ್ ಬಿಹಾರದಲ್ಲಿ ಕೊಲೆ, ಸುಲಿಗೆ ಮತ್ತು ಸಂಘಟಿತ ಅಪರಾಧ ಚಟುವಟಿಕೆಗಳು ಸೇರಿದಂತೆ ಹಲವಾರು ಘೋರ ಅಪರಾಧಗಳಲ್ಲಿ ಪೊಲೀಸರಿಗೆ ಬೇಕಾಗಿದ್ದವರು ಎಂದು ದೆಹಲಿ ಪೊಲೀಸ್ ಮೂಲಗಳು ತಿಳಿಸಿದ್ದಾರೆ.

ದೆಹಲಿ ಪೊಲೀಸ್ ಮೂಲಗಳ ಪ್ರಕಾರ, ಗ್ಯಾಂಗ್ ಸದಸ್ಯರನ್ನು ತಡೆಯಲು ಪೊಲೀಸರು ಕೈಗೊಂಡ ಕಾರ್ಯಾಚರಣೆಯ ಭಾಗವಾಗಿ ಈ ಎನ್ಕೌಂಟರ್ ನಡೆದಿದೆ. ಗ್ಯಾಂಗ್ಸ್ಟರ್ಗಳು ಪೊಲೀಸರ ಮೇಲೆ ಗುಂಡು ಹಾರಿಸಿದ ನಂತರ, ಪೊಲೀಸರು ಪ್ರತಿಉತ್ತರ ನೀಡಿದ್ದಾರೆ. ಎಲ್ಲಾ ನಾಲ್ವರು ಆರೋಪಿಗಳಿಗೆ ಗುಂಡೇಟು ಬಿದ್ದಿದ್ದು, ಅವರನ್ನು ರೋಹಿಣಿಯ ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಆಸ್ಪತ್ರೆಗೆ ದಾಖಲಿಸಲಾಗಿತ್ತು.ಆದರೆ ಅಲ್ಲಿ ಆಸ್ಪತ್ರೆಯ ವೈದ್ಯರು ನಾಲ್ವರು ಸಾವನ್ನಪ್ಪಿದ್ದಾರೆಂದು ದೃಢಪಡಿಸಿದ್ದಾರೆ.

ಪಾಠಕ್ನನ್ನು ಹಿಡಿದುಕೊಟ್ಟವರಿಗೆ 25,000 ರೂ. ಬಹುಮಾನ ನೀಡುವುದಾಗಿ ಘೋಷಿಸಲಾಗಿತ್ತು . ಸೀತಾಮರ್ಹಿ ಮತ್ತು ಬಿಹಾರದ ಪಕ್ಕದ ಜಿಲ್ಲೆಗಳಲ್ಲಿ ನಡೆದ ಐದು ಪ್ರಮುಖ ಕೊಲೆಗಳು ಸೇರಿದಂತೆ ಎಂಟು ಕ್ರಿಮಿನಲ್ ಪ್ರಕರಣಗಳಲ್ಲಿ ಪಾಠಕ್ ಬೇಕಾಗಿದ್ದ.ಪಾಠಕ್ ಸಾಮಾಜಿಕ ಮಾಧ್ಯಮ ಮತ್ತು ಆಡಿಯೊ ಸಂದೇಶಗಳ ಮೂಲಕ ಪೊಲೀಸರಿಗೆ ಬಹಿರಂಗವಾಗಿ ಸವಾಲು ಹಾಕುತ್ತಿದ್ದ ಎಂದು ದೆಹಲಿ ಪೊಲೀಸ್ ಮೂಲವೊಂದು ಬಹಿರಂಗಪಡಿಸಿದೆ.
ಇತ್ತೀಚೆಗೆ ಪತ್ತೆಯಾಗಿರುವ ಆಡಿಯೊ ಕ್ಲಿಪ್ ಬಿಹಾರದಲ್ಲಿ ನಡೆಯಲಿರುವ ವಿಧಾನಸಭಾ ಚುನಾವಣೆಗೆ ಮುನ್ನ ಗ್ಯಾಂಗ್ ರೂಪಿಸುತ್ತಿದ್ದ ಪ್ರಮುಖ ಪಿತೂರಿಯ ವಿವರಗಳನ್ನು ಬಹಿರಂಗಪಡಿಸಿದೆ ಎನ್ನಲಾಗಿದೆ. ಎನ್ಕೌಂಟರ್ ನಂತರ, ಪ್ರದೇಶವನ್ನು ಸುತ್ತುವರಿಯಲಾಯಿತು ಮತ್ತು ಸಾಕ್ಷ್ಯಗಳನ್ನು ಸಂಗ್ರಹಿಸಲು ವಿಧಿವಿಜ್ಞಾನ ತಂಡಗಳನ್ನು ಕರೆಸಲಾಯಿತು. ಗ್ಯಾಂಗ್ನ ಉಳಿದ ಜಾಲ ಮತ್ತು ಅವರ ಸಂಭಾವ್ಯ ಸಂಪರ್ಕಗಳನ್ನು ಪತ್ತೆಹಚ್ಚಲು ತನಿಖೆ ನಡೆಯುತ್ತಿದೆ.