ಬಂಟರ ಸಂಘ – ಗ್ರಾಮ ಸಮಿತಿ ಉಜಿರೆ ಇವರ ನೇತೃತ್ವದಲ್ಲಿ “ಆಟಿಡೊಂಜಿ ದಿನ“


ಉಜಿರೆ: ಬಂಟರ ಸಂಘ, ಗ್ರಾಮ ಸಮಿತಿ ಉಜಿರೆ ಇವರ ನೇತೃತ್ವದಲ್ಲಿ ತುಳುನಾಡಿನ ಸಂಸ್ಕೃತಿ ಆಹಾರ ಕ್ರಮ ಆಚಾರ ವಿಚಾರಗಳನ್ನು ಬಿಂಬಿಸುವ ಮತ್ತು ಮುಂದಿನ ಪೀಳಿಗೆಗೆ ಅದನ್ನು ತಿಳಿಯಪಡಿಸುವ ಸಲುವಾಗಿ “ಆಟಿಡೊಂಜಿ ದಿನ” ಎಂಬ ವಿಶೇಷ ಕಾರ್ಯಕ್ರಮ ಉಜಿರೆಯ ಶಾರದಾ ಮಂಟಪದಲ್ಲಿ ಸಮಸ್ತ ಬಂಟ ಸಮಾಜದ ಬಾಂಧವರ ಕೂಡುವಿಕೆಯಿಂದ ಯಶಸ್ವಿಯಾಗಿ ನಡೆಯಿತು..


ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಶ್ರೀಯುತ ಚಿತ್ರೇಶ್ ಶೆಟ್ಟಿ ಉಜಿರೆ ಅಧ್ಯಕ್ಷರು, ಗ್ರಾಮ ಸಮಿತಿ, ಬಂಟರ ಸಂಘ ಉಜಿರೆ ಇವರು ಕಾರ್ಯಕ್ರಮದ ಉದ್ದೇಶದ ಬಗ್ಗೆ ತಮ್ಮ ಪ್ರಾಸ್ತಾವಿಕ ಭಾಷಣದಲ್ಲಿ ಕಾರ್ಯಕ್ರಮದ ಉದ್ದೇಶವನ್ನು ವಿವರಿಸಿದರು ಹಾಗೂ ಅತಿಥಿ ಅಭ್ಯಾಗತರನ್ನು ಆತ್ಮೀಯವಾಗಿ ಸ್ವಾಗತಿಸಿದರು.
ಸಭಾ ಕಾರ್ಯಕ್ರಮದ ಉದ್ಘಾಟನೆಯನ್ನು ನೆರವೇರಿಸಿದ ಶ್ರೀಯುತ ಪ್ರಕಾಶ್ ಶೆಟ್ಟಿ ನೊಚ್ಚ, ಅಧ್ಯಕ್ಷರು, ಬಂಟರ ಸಂಘ (ರಿ)ಬೆಳ್ತಂಗಡಿ ತಾಲೂಕು ಇವರು ಮಾತನಾಡಿ, ಇಂದಿನ ಮಕ್ಕಳಿಗೆ ನಮ್ಮ ಸಂಸ್ಕೃತಿ, ಸಂಸ್ಕಾರ, ಪರಂಪರೆಯ ಬಗ್ಗೆ ತಿಳುವಳಿಕೆಯ ಅಗತ್ಯತೆ ತುಂಬಾ ಇದೆ. ಅದನ್ನು ನಮ್ಮ ಮಕ್ಕಳಲ್ಲಿ ಜಾಗೃತಗೊಳಿಸುವ ವಿಶೇಷ ಪ್ರಯತ್ನ ನಾವು ನೀವೆಲ್ಲರೂ ಸೇರಿ ಮಾಡಬೇಕಾಗಿದೆ ಎಂದು ಕರೆ ನೀಡಿದರು. ಬೆಳ್ತಂಗಡಿ ತಾಲೂಕು ಬಂಟರ ಸಂಘದ ನೂತನ ಅಧ್ಯಕ್ಷರಾಗಿ ಆಯ್ಕೆಯಾದ ಶ್ರೀಯುತ ಪ್ರಕಾಶ್ ಶೆಟ್ಟಿ ನೊಚ್ಚ ಇವರನ್ನು ಈ ಸಂದರ್ಭದಲ್ಲಿ ಬಂಟರ ಸಂಘ ಗ್ರಾಮ ಸಮಿತಿ ಉಜಿರೆ ಇದರ ವತಿಯಿಂದ ಸನ್ಮಾನಿಸಲಾಯಿತು..


ಕಾರ್ಯಕ್ರಮದ ಇನ್ನೋರ್ವ ಮುಖ್ಯ ಅತಿಥಿ ಶ್ರೀಯುತ ರಾಜು ಶೆಟ್ಟಿ ಬೆಂಗೆತ್ತ್ಯಾರು ಮಾತನಾಡಿ ಸಂಘಟನೆಯನ್ನು ಬಲಪಡಿಸುವ ಉದ್ದೇಶದಿಂದ ನಾವೆಲ್ಲರೂ ಕೈಜೋಡಿಸಬೇಕು ಇಂತಹ ಕಾರ್ಯಕ್ರಮಗಳು ನಮ್ಮ ಬಾಂಧವ್ಯವನ್ನು ಬೆಸೆಯುವ ಪ್ರಯತ್ನವನ್ನು ಮಾಡುತ್ತವೆ ಎಂದರು.
ಬಂಟರ ಸಂಘ ಉಜಿರೆ ವಲಯದ ಸ್ಥಾಪಕ ಸದಸ್ಯರಾದ ಶ್ರೀಯುತ ಉಮೇಶ್ ಶೆಟ್ಟಿ ಉಜಿರೆ, ನಿರ್ದೇಶಕರು,ಬಂಟರ ಸಂಘ ಬೆಳ್ತಂಗಡಿ , ಉದ್ಯಮಿಗಳು, ದುರ್ಗಾ ವುಡ್ ಇಂಡಸ್ಟ್ರೀಸ್ ಇವರು ಮಾತನಾಡಿ ಕಾರ್ಯಕ್ರಮಕ್ಕೆ ಶುಭ ಹಾರೈಸಿದರು.


ಬಂಟರ ಸಂಘ ಬೆಳ್ತಂಗಡಿ ತಾಲೂಕು ಮಹಿಳಾ ವಿಭಾಗದ ನೂತನ ಅಧ್ಯಕ್ಷರಾಗಿ ಆಯ್ಕೆಯಾದ ಶ್ರೀಮತಿ ವಸುಧಾ ಪಿ.ಶೆಟ್ಟಿ ಹಾಗೂ ಶ್ರೀ ರವೀಂದ್ರ ಶೆಟ್ಟಿ ಸುರಭಿ, ಉಜಿರೆ, ಅಧ್ಯಕ್ಷರು, ಬಂಟರ ಸಂಘ ಉಜಿರೆ ವಲಯ ಇವರನ್ನು ಗೌರವಿಸಿ ಸನ್ಮಾನಿಸಲಾಯಿತು ಮತ್ತು ಸನ್ಮಾನಿತರು ಮಾತನಾಡಿ ಕಾರ್ಯಕ್ರಮಕ್ಕೆ ಶುಭಹಾರೈಸಿದರು. ಶ್ರೀಯುತ ಕರುಣಾಕರ್ ಶೆಟ್ಟಿ ಕಾರ್ಯದರ್ಶಿಗಳು, ಬಂಟರ ಸಂಘ-ಗ್ರಾಮ ಸಮಿತಿ ಉಜಿರೆ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಬೆಳ್ತಂಗಡಿ ತಾಲೂಕು ಬಂಟರ ಸಂಘದ ನೂತನ ನಿರ್ದೇಶಕರಾಗಿ ಆಯ್ಕೆಯಾದ ಉಜಿರೆ ವಲಯದ ಶ್ರೀ ಜಯಂತ್ ಶೆಟ್ಟಿ ಕುಂಟಿನಿ ಶ್ರೀ ವೆಂಕಟರಮಣ ಶೆಟ್ಟಿ, ಶ್ರೀ ನಿರಂಜನ್ ಶೆಟ್ಟಿ, ಶ್ರೀಮತಿ ವನಿತಾ ವಿ ಶೆಟ್ಟಿ, ಶ್ರೀ ಪುರುಷೋತ್ತಮಶೆಟ್ಟಿ ಅಗರಿ ಇವರನ್ನು ಶಾಲು ಹೊದಿಸಿ ಗೌರವಿಸಲಾಯಿತು.
ಶ್ರೀ ಸದಾಶಿವ ಶೆಟ್ಟಿ ಕಕ್ಕೆಜಾಲು ಇವರ ಪ್ರಾಯೋಜಕತ್ವದಲ್ಲಿ, ಶ್ರೀ ನಿರಂಜನ್ ಶೆಟ್ಟಿ ಉಜಿರೆ ಉಪಾಧ್ಯಕ್ಷರು ಹಾಗೂ ಸಾಂಸ್ಕೃತಿಕ ಸಂಚಾಲಕರು ಇವರ ಮುಂದಾಳತ್ವದಲ್ಲಿ ಶ್ರೀಮತಿ ಪವಿತ್ರ ಶೆಟ್ಟಿ ಕುಂಟಿನಿ, ಜೊತೆ ಕಾರ್ಯದರ್ಶಿ ಬಂಟರ ಸಂಘ ಗ್ರಾಮ ಸಮಿತಿ ಉಜಿರೆ ಮತ್ತು ಕುಮಾರಿ ಸೋನಾಕ್ಷಿ ಶೆಟ್ಟಿ ಇವರ ಮಾರ್ಗದರ್ಶನದಲ್ಲಿ, ಸಭಾ ಕಾರ್ಯಕ್ರಮದ ಮೊದಲು ಮಕ್ಕಳಿಂದ ಮತ್ತು ಮಹಿಳೆಯರಿಂದ ಆಷಾಢದ ಸೊಗಡನ್ನು ಮತ್ತು ತುಳುನಾಡಿನ ಸಂಸ್ಕೃತಿಯನ್ನು ಪ್ರತಿಬಿಂಬಿಸುವ ಸಾಂಸ್ಕೃತಿಕ ಕಾರ್ಯಕ್ರಮ ವಿಶೇಷ ಆಕರ್ಷಣೆಯಾಗಿತ್ತು. ತುಳುನಾಡಿನ ಕೃಷಿ ಪರಂಪರೆಯನ್ನು ಪ್ರತಿಬಿಂಬಿಸುವಂತಹ ಹಳೆಯ ಕಾಲದ, ವ್ಯವಸಾಯದಲ್ಲಿ ಉಪಯೋಗಿಸುತ್ತಿದ್ದ ಕೃಷಿ ಪರಿಕರಗಳ ಪ್ರದರ್ಶನ ಮತ್ತು ಹಳೆಯ ಕಾಲದ ಆಟಗಳಾದ ಕುಟ್ಟಿ ದೊಣ್ಣೆ, ಲಗೋರಿ, ಕುಂಟೆಬಿಲ್ಲೆ, ಕಲ್ಲಾಟ ಚೆನ್ನೆ ಮಣೆ ಮುಂತಾದ ಮಕ್ಕಳ ಆಟದ ಕೂಟ ಕಾರ್ಯಕ್ರಮಕ್ಕೆ ವಿಷಯ ಮೆರುಗನ್ನು ನೀಡಿತು.
ನಂತರ ಆಷಾಢ ತಿಂಗಳಲ್ಲಿ ಮಾಡುವ ವಿಶೇಷ ತಿಂಡಿ ತಿನಿಸುಗಳ ಮೇಳ ಕಾರ್ಯಕ್ರಮದ ಪ್ರಮುಖ ಆಕರ್ಷಣೆಯಾಗಿತ್ತು. ಸುಮಾರು 42 ಬಗೆಯ ಆಷಾಢ ತಿಂಗಳಲ್ಲಿ ಮಾಡುವ ವಿಶೇಷ ಖಾದ್ಯಗಳನ್ನು ತಯಾರಿಸಿ ಬಂಟ ಸಮಾಜದ ಮಹಿಳೆಯರು ಎಲ್ಲರಿಗೂ ಉಣ ಬಡಿಸುವ ಮೂಲಕ ಮಕ್ಕಳಿಗೆ ಈ ಖಾದ್ಯಗಳ ಪರಿಚಯವಾಯಿತು. ಈ ಖಾದ್ಯಗಳನ್ನು ತಯಾರಿಸುವಲ್ಲಿ ವಿಶೇಷ ಶ್ರಮವಹಿಸಿದ ಎಲ್ಲಾ ಮಹಿಳೆಯರನ್ನು ಗೌರವಿಸಲಾಯಿತು.
ಬಂಟ ಸಮಾಜದ ಬಾಂಧವರಿಗಾಗಿ ಪರಿಚಯಿಸಲಾದ ವಿಶೇಷ ಬಂಟ ನಿಧಿ ಕಾರ್ಯಕ್ರಮದ ಬಗ್ಗೆ ಶ್ರೀಯುತ ಮಂಜುನಾಥ್ ಶೆಟ್ಟಿ ನಿಡಿಗಲ್ ಇವರು ಮಾಹಿತಿ ನೀಡಿದರು.
ಈ ಸಂದರ್ಭದಲ್ಲಿ ಉಜಿರೆಯಲ್ಲಿ ಅನಾರೋಗ್ಯ ಪೀಡಿತರಾಗಿರುವ ಸಮಾಜದ ಒಬ್ಬ ಸದಸ್ಯರಿಗೆ ರೂ.10,000 ನೀಡಿ ಸಹಕರಿಸಲಾಯಿತು.
ಶ್ರೀ ಸುಭಾಷ್ಚಂದ್ರ ಶೆಟ್ಟಿ, ಅಧ್ಯಕ್ಷರು ವಿದ್ವತ್ ಪಿಯು ಕಾಲೇಜು ಗುರುವಾಯನಕೆರೆ, ಡಾ. ಕುಮಾರ ಹೆಗ್ಡೆ, ನಿವೃತ್ತ ಪ್ರಾಂಶುಪಾಲರು, ಎಸ್ . ಡಿ .ಎಂ ಕಾಲೇಜು, ಸುರೇಶ್ ಶೆಟ್ಟಿ ಲಾಯಿಲಾ, ಶ್ರೀ ವಸಂತ್ ಶೆಟ್ಟಿ ಶ್ರದ್ಧಾ, ಕೋಶಾಧಿಕಾರಿ, ಬಂಟರ ಸಂಘ ಬೆಳ್ತಂಗಡಿ ತಾಲೂಕು, ಡಾ. ಶಿವಪ್ರಸಾದ್ ಶೆಟ್ಟಿ, ಪ್ರಾಂಶುಪಾಲರು, ಬಿ.ಎನ್.ವೈ.ಎಸ್ ಉಜಿರೆ, ಶ್ರೀ ರಘುರಾಮ್ ಶೆಟ್ಟಿ, ಸಾಧನ, ಅಧ್ಯಕ್ಷರು ಲಯನ್ಸ್ ಕ್ಲಬ್ ಬೆಳ್ತಂಗಡಿ , ಶ್ರೀ ಜಯರಾಮ್ ಶೆಟ್ಟಿ ಕೆಂಬರ್ಜೆ, ಶ್ರೀಮತಿ ಪವಿತ್ರ ಸುಕುಮಾರ್ ಶೆಟ್ಟಿ , ಉಪಾಧ್ಯಕ್ಷರು, ಬಂಟರ ಸಂಘ ಉಜಿರೆ ವಲಯ, ಸಂಜೀವ ಶೆಟ್ಟಿ , ರಾಧಾಕೃಷ್ಣ ಶೆಟ್ಟಿ ಕುಂಟಿನಿ, ಪುಷ್ಪಾವತಿ ಆರ್ ಶೆಟ್ಟಿ ಉಜಿರೆ, ಅಜಿತ್ ಶೆಟ್ಟಿ ಕುಂಜರ್ಪ, ಸುರೇಶ್ ಶೆಟ್ಟಿ ಉಂಡ್ಯಪು ಇನ್ನಿತರರು ಉಪಸ್ಥಿತರಿದ್ದು ಕಾರ್ಯಕ್ರಮಕ್ಕೆ ಸಾಕ್ಷಿಯಾದರು.
ಕಾರ್ಯಕ್ರಮದ ಕೊನೆಯಲ್ಲಿ 80ನೇ ಸ್ವಾತಂತ್ರ್ಯೋತ್ಸವದ ಶುಭ ಸಂದರ್ಭದಲ್ಲಿ ರಾಷ್ಟ್ರಗೀತೆ ಹಾಡುವ ಮೂಲಕ ಕಾರ್ಯಕ್ರಮವನ್ನು ಮುಕ್ತಾಯಗೊಳಿಸಲಾಯಿತು. ಅಶೋಕ್ ಕುಮಾರ್ ಶೆಟ್ಟಿ, ಕೋಶಾಧಿಕಾರಿ, ಬಂಟರ ಸಂಘ ಗ್ರಾಮ ಸಮಿತಿ ಉಜಿರೆ, ಇವರು ಕಾರ್ಯಕ್ರಮಕ್ಕೆ ಸ್ಪಂದಿಸಿದ ಹಾಗೂ ಸಹಕರಿಸಿದ ಎಲ್ಲರಿಗೂ ಧನ್ಯವಾದ ಸಮರ್ಪಿಸಿದರು.ಕಾರ್ಯಕ್ರಮದ ನಿರೂಪಣೆಯನ್ನು ಕುಮಾರಿ ಸೋನಾಕ್ಷಿ ಶೆಟ್ಟಿ ಮತ್ತು ಮನಿಶ್ ಶೆಟ್ಟಿ ಅತ್ಯುತ್ತಮವಾಗಿ ನಿರ್ವಹಿಸಿದರು.

error: Content is protected !!